ಕೋಲ್ಕತ್ತ: ಪಶ್ಚಿಮ ಬಂಗಾಳದ 20 ಜಿಲ್ಲೆಗಳಲ್ಲಿ ಪಂಚಾಯ್ತಿ ಚುನಾವಣೆಗೆ ಸೋಮವಾರ ಬೆಳಿಗ್ಗೆ ಮತ ಚಲಾವಣೆ ಆರಂಭವಾಗಿದೆ. ಈ ವೇಳೆ ಕೆಲವೆಡೆ ಗಲಾಟೆಗಳು ನಡೆದಿದ್ದು, ಮಾಧ್ಯಮದವರ ವಾಹನಗಳಿಗೆ ಹಾನಿಯಾಗಿದೆ.
ಮತ ಚಲಾಯಿಸಲು ಜನರು ಮತಗಟ್ಟೆಗಳ ಬಳಿ ಸರದಿಯಲ್ಲಿ ನಿಂತಿದ್ದಾರೆ. ಭದ್ರತೆಗೆ ಪೊಲೀಸ್, ಅರೆ ಸೇನಾಪಡೆ ನಿಯೋಜಿಸಲಾಗಿದೆ.
ಭಾನುವಾರ ರಾತ್ರಿ ಸಿಪಿಐ(ಎಂ) ಕಾರ್ಯಕರ್ತರೊಬ್ಬರ ಮನಗೆ ಬೆಂಕಿ ಹಚ್ಚಿ, ಹತ್ಯೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ಟಿಎಂಸಿ ಕಾರ್ಯರ್ತರ ಕೈವಾಡ ಇದೆ ಎಂದು ಆರೋಪಿಸಲಾಗಿದೆ.
ಮತಚಲಾವಣೆ ಪ್ರಕ್ರಿಯೆ ಆರಂಭವಾದ ಕೆಲ ಹೊತ್ತಿನಲ್ಲೇ ಕೆಲ ಕಡೆ ಗಲಾಟೆಗಳು ನಡೆದಿವೆ. ಬೀರ್ಪುರದ ಮತಗಟ್ಟೆಯೊಂದರ ಬಳಿ ಮತದಾರರ ಮತಗಟ್ಟೆಯತ್ತ ತೆರಳದಂತೆ ಟಿಎಂಸಿ ಕಾರ್ಯಕರ್ತರು ತಡೆದಿದ್ದಾರೆ. ಕೋಲು, ಬಡಗಿಗಳನ್ನು ಹಿಡಿದ ಕಾರ್ಯಕರ್ತರು, ಜನರನ್ನು ತಡೆದು ಬೆದರಿಕೆ ಹಾಕಿದ ಘಟನೆಗಳು ನಡೆದಿವೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ದಾದ ಬಳಿಕ ರಸ್ತೆತಡೆ ಮಾಡಿ ಪ್ರತಿಭಟನೆ ನಡೆದಿದೆ. ಮತಗಟ್ಟೆಬಳಿ ನೂರಾರು ಜನರ ಗುಂಪು ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಂಗ್ ನಗರದಲ್ಲಿ ಹಿಂಸಾಚಾರ ನಡೆದಿದ್ದು, ಈ ಪ್ರದೇಶಕ್ಕೆ ಮಾಧ್ಯಮದವರಿಗೆ ಪ್ರವೇಶ ನೀಡುವುದಿಲ್ಲ ಎಂದು ತಡೆದಿರುವ ಜನ ಗುಂಪು, ಮಾಧ್ಯಮದವರ ವಾಹನ ಮತ್ತು ಕ್ಯಾಮೆರಾವನ್ನೂ ಹಾನಿಗೊಳಿಸಿದ್ದಾರೆ.
ಬೆಳಿಗ್ಗೆ ಮಳೆ ಬೀಳುತ್ತಿದ್ದುದರಿಂದ ಜಲ್ಪಿಗುರಿಯ ಅಶರ್ಘರ್ ಮತಗಟ್ಟೆಯಲ್ಲಿ ಮತದಾರರು ಕೊಡೆಯ ಆಶ್ರಯ ಪಡೆದು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.