ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಪಾಕಿಸ್ತಾನದ ಸೇನೆ ಸೋಮವಾರ ನಡೆಸಿದ ಗುಂಡು ಹಾಗೂ ಷೆಲ್ ದಾಳಿಗೆ 6 ಮತ್ತು 10 ವರ್ಷದ ಬಾಲಕರು ಹಾಗೂ 15 ವರ್ಷದ ಒಬ್ಬ ಹುಡುಗಿ ಸಾವನ್ನಪ್ಪಿದ್ದಾರೆ. 11 ಜನ ಗಾಯಗೊಂಡಿದ್ದಾರೆ.
‘ಗಡಿ ನಿಯಂತ್ರಣ ರೇಖೆ ಬಳಿಯ ದೆಗ್ವಾರ್, ಬನ್ವತ್, ಬಗ್ಯಾಲ್ ಧಾರಾ, ಶಾಹಪುರ ಮತ್ತು ಕಿರ್ನಿ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯು ಬೆಳಿಗ್ಗೆ 6.50ರ ಸುಮಾರಿಗೆ ದಾಳಿ ನಡೆಸಿದೆ. ಈ ವೇಳೆ ನಾಲ್ವರು ಸೈನಿಕರೂ ಗಾಯಗೊಂಡಿದ್ದಾರೆ. ಬೆಳಿಗ್ಗೆ 10.25ರ ವೇಳೆಗೆ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದ್ದು ಆಗ ಮತ್ತೆ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಪ್ರತಿಯಾಗಿ ಭಾರತವೂ ಗುಂಡಿನ ದಾಳಿ ನಡೆಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕದನ ವಿರಾಮ ಉಲ್ಲಂಘಿಸುವ ಮೂಲಕ ಉಗ್ರರನ್ನು ಭಾರತದೊಳಕ್ಕೆ ಕಳುಹಿಸುವುದು ಪಾಕಿಸ್ತಾನದ ಹುನ್ನಾರ. ಇದಕ್ಕೆ ಪ್ರತಿಯಾಗಿ ನುಸುಳುವಿಕೆ ನಿಗ್ರಹ ಪಡೆಯ ಬಲ ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಐವರು ಉಗ್ರರ ಹತ್ಯೆ: ‘ಸೋಮವಾರ ಬಾರಾಮುಲ್ಲಾ ಜಿಲ್ಲೆಯ ರಾಮಪುರ ಪ್ರದೇಶದಲ್ಲಿ ಒಳನುಸುಳುವ ಉಗ್ರರ ಯತ್ನವನ್ನು ಭಾರತ ಸೇನೆಯು ತಡೆದಿದೆ. ಈ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.