ನವದೆಹಲಿ (ಪಿಟಿಐ): ಭೂಗತ ಲೋಕದ ಪಾತಕಿ ಅಬುಸಲೇಂನ ಸಹಚರನೊಬ್ಬ ನನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಾನ್ ಉಸ್ಮಾನ್ ಖಾನ್ ಅಲಿಯಾಸ್ ರೀನು ಎಂದು ಗುರುತಿಸಲಾಗಿದ್ದು, ಈತನನ್ನು ಶನಿವಾರ ಸಂಜೆ ಇಲ್ಲಿನ ಐಎಸ್ಬಿಟಿ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ನಕಲಿ ನೋಟು ಚಲಾವಣೆ ಪ್ರಕರಣ, ಕೊಲೆ, ಮುಂಬೈ ಹಾಗೂ ದೆಹಲಿಯಲ್ಲಿ ದರೋಡೆ ಪ್ರಕರಣಗಳು ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಆರೋಪಿಯಿಂದ ನಾಡಬಂದೂಕು, 3 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನನ್ನು ಈ ಮುಂಚೆ 2000ರಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಅವರಪತಿ, ನಿರ್ಮಾಪಕ ಅನಿಲ್ ತದಾನಿ ಅವರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ಮುಂಬೈ ನಲ್ಲಿ ಬಂಧಿಸಿದ್ದರು.
ಉತ್ತರ ದೆಹಲಿಯ ಸರಯ್ ರೊಹಿಲ್ಲದ ತ್ರಿನಗರ ಪ್ರದೇಶದಲ್ಲಿ ಜಾನ್ ಉಸ್ಮಾನ್ ಖಾನ್ ವಾಸಿಸುತ್ತಿದ್ದನು. ಪಾತಕಿ ಅಬುಸಲೇಂನೊಂದಿಗೆ ಸಂಪರ್ಕ ಹೊಂದಿದ್ದ ಈತ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಪರಾಧ ವಿಭಾಗದ ಜಂಟಿ ಮಹಾನಿರ್ದೇಶಕ ರವೀಂದ್ರ ಯಾದವ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.