ADVERTISEMENT

ಪುಣೆ: ಅತ್ಯಾಚಾರಿ ಕೊಲೆಗಡುಕರಿಬ್ಬರಿಗೆ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 11:05 IST
Last Updated 20 ಮಾರ್ಚ್ 2012, 11:05 IST

ಪುಣೆ (ಐಎಎನ್ಎಸ್): ಕಾಲ್ ಸೆಂಟರ್ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಂದ 2007ರ ಪ್ರಕರಣವೊಂದರಲ್ಲಿ ಅಪರಾಧಿಗಳೆಂದು ಸಾಬೀತಾಗಿದ್ದ ಇಬ್ಬರು ವ್ಯಕ್ತಿಗಳಿಗೆ ನಗರದ ನ್ಯಾಯಾಲಯವೊಂದು ಮಂಗಳವಾರ ಮರಣ ದಂಡನೆ ವಿಧಿಸಿದೆ.

ಚಾಲಕ ಪುರುಷೋತ್ತಮ ಬೊರಾಡೆ ಮತ್ತು ಆತನ ಗೆಳೆಯ ಪ್ರದೀಪ ಕೋಕಡೆ ಅವರಿಗೆ ಪುಣೆಯ ಬಹುರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ 25ರ ಹರೆಯದ ಮಹಿಳೆ ಜ್ಯೋತಿಕುಮಾರಿ ಚೌಧರಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಂದ ಅಪರಾಧಕ್ಕಾಗಿ ನಗರ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ ಎಂದು ತನಿಖಾಧಿಕಾರಿ ರಾಜೇಂದ್ರ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ಏನಿದ್ದರೂ ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದಾಗಿದ್ದು, ಶಿಕ್ಷಿತರಿಬ್ಬರೂ ಈಗಾಗಲೇ ತೀರ್ಪನ್ನು ಪ್ರಶ್ನಿಸಲು ತೀರ್ಮಾನಿಸಿದ್ದಾರೆ ಎಂದು ಅವರು ನುಡಿದರು.

ಬೊರಾಡೆ ಮತ್ತು ಕೋಕಡೆ ಅವರ ಮೇಲಿನ ಆರೋಪಗಳನ್ನು ತಳ್ಳಿ ಹಾಕಿರುವ ಇವರಿಬ್ಬರ ಪರ ವಕೀಲ ಅತುಲ್ ಪಾಟೀಲ್ ಅವರು ~ಪೊಲೀಸರು ಇವರಿಬ್ಬರ ವಿರುದ್ಧ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ್ದಾರೆ~ ಎಂದು ಹೇಳಿದ್ದಾರೆ.
ನಾವು ಮರಣದಂಡನೆಯನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಅವರು ನುಡಿದರು.

2007ರ ನವೆಂಬರ್ 1ರಂದು ರಾತ್ರಿ ಮೃತ ಜ್ಯೋತಿಕುಮಾರಿ ಪುಣೆಯ ಹೊರ ವಲಯ ಹಿಂಜೆವಾಡಿಯಲ್ಲಿ ಕಚೇರಿಯ ವಾಹನದಲ್ಲಿ ಕಚೇರಿಗೆ ಹೊರಟಿದ್ದರು. ವಾಹನವನ್ನು ಬೊರಾಡೆ ಚಲಾಯಿಸುತ್ತಿದ್ದರೆ, ಕೋಕಡೆ ಆತನ ಹಿಂಭಾಗದಲ್ಲಿ ಕುಳಿತಿದ್ದ.

ಇನ್ನೊಬ್ಬ ಸಹೋದ್ಯೋಗಿಯನ್ನು ಕರೆತರಬೇಕಾಗಿದೆ ಎಂದು ಹೇಳಿ ವಾಹನವನ್ನು ಬೇರೆಡೆಗೆ ತಿರುಗಿಸಿದ ಇವರು ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯ ನಿರ್ಜನ ಪ್ರದೇಶಕ್ಕೆ ವಾಹನವನ್ನು ಒಯ್ದು, ಜ್ಯೋತಿಕುಮಾರಿಯ ಮೇಲೆ ಅತ್ಯಾಚಾರ ಎಸಗಿ, ಮುಖವನ್ನು ಕಲ್ಲಿನಿಂದ ಜಜ್ಜಿ, ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಎಸೆದು ಕಚೇರಿಗೆ ವಾಪಸಾಗಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.