ನವದೆಹಲಿ: ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಪೊಲೀಸರೊಂದಿಗೆ ತೂರಾಡುತ್ತಿರುವ ಹಾಗೂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಕುರ್ಚಿಯಲ್ಲಿ ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ದೆಹಲಿ ಪೊಲೀಸರು ಮುಜುಗರಕ್ಕೆ ಸಿಲುಕಿದ್ದು, ಘಟನೆಯ ತನಿಖೆಗೆ ಆದೇಶಿಸಲಾಗಿದೆ.
ವಿವೇಕ ವಿಹಾರ ಪೊಲೀಸ್ ಠಾಣೆಯ ಪೊಲೀಸರ ಕುರ್ಚಿಯಲ್ಲಿ ಕೂತ ರಾಧೇ ಮಾ ಪಕ್ಕದಲ್ಲಿ, ಪೊಲೀಸ್ ಅಧಿಕಾರಿ ಕೆಂಪು ಮತ್ತು ಚಿನ್ನದ ಬಣ್ಣದ ಶಾಲು ಹೊದ್ದು ಕೈ ಕಟ್ಟಿ ನಿಂತ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿದೆ. ಜಿಟಿಬಿ ಎನ್ಕ್ಲೇವ್ನಲ್ಲಿ ನಡೆದ ’ರಾಮಲೀಲಾ’ ಕಾರ್ಯಕ್ರಮದಲ್ಲಿ ದೇವರ ಭಜನೆ ಹಾಡುತ್ತಿರುವ ಐವರು ಪೊಲೀಸರೊಂದಿಗೆ ರಾಧೇ ಮಾ ತೂರಾಡುತ್ತಿರುವ ವಿಡಿಯೊ ತುಣುಕನ್ನು ದೇವಮಹಿಳೆಯ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ.
ರಾಮಲೀಲಾ ಕಾರ್ಯಕ್ರಮಕ್ಕೆ ಹೊರಟಿದ್ದ ರಾಧೇ ಮಾ ಶೌಚಾಲಯ ಬಳಸಲೆಂದು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಜನರ ಗಮನ ಸೆಳೆಯುವಂತಹ ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸುಖವಿಂದರ್ ಕೌರ್ ಅಲಿಯಾಸ್ ರಾಧೇ ಮಾ ಹಲವಾರು ವಿವಾದಗಳಲ್ಲಿ ಸಿಲುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.