ನವದೆಹಲಿ: ‘ಆಧಾರ್ ಸಂಖ್ಯೆ ಪಡೆಯಲು ಅರ್ಹರಿರುವ ಎಲ್ಲರೂ ಪ್ಯಾನ್ ಕಾರ್ಡ್ಗೆ ಅರ್ಜಿ ಹಾಕುವಾಗ ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸುವಾಗ ಆಧಾರ್ ಸಂಖ್ಯೆ ನಮೂದಿಸುವುದು ಜುಲೈ1 ರಿಂದ ಕಡ್ಡಾಯ’ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ.
ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಜೋಡಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು. ಅಲ್ಲದೆ, ಖಾಸಗಿತನದ ಹಕ್ಕಿನ ವಿಚಾರ ಇತ್ಯರ್ಥವಾಗುವವರೆಗೆ ಆಧಾರ್ ಸಂಖ್ಯೆ ಇಲ್ಲದವರಿಗೆ ಈ ಕಾನೂನಿಂದ ತಾತ್ಕಾಲಿಕ ವಿನಾಯಿತಿಯನ್ನೂ ಸುಪ್ರೀಂ ಕೋರ್ಟ್ ನೀಡಿತ್ತು. ಅದನ್ನು ಉಲ್ಲೇಖಿಸಿ ಸಿಬಿಡಿಟಿ ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕೇವಲ ತಾತ್ಕಾಲಿಕ: ‘ಆಧಾರ್ ಜೋಡಣೆ ಮಾಡದೇ ಇರುವ ಕಾರಣಕ್ಕೆ ಪ್ಯಾನ್ ರದ್ದುಮಾಡಿದರೆ ಜನರಿಗೆ ಹಣಕಾಸು ವ್ಯವಹಾರ ನಡೆಸಲು ಆಗುವುದಿಲ್ಲ. ಈ ಕಾರಣ ಇಟ್ಟುಕೊಂಡು ಸುಪ್ರೀಂ ಕೋರ್ಟ್ ಆಧಾರ್ ಸಂಖ್ಯೆ ಇಲ್ಲದೇ ಇರುವವರಿಗೆ ತಾತ್ಕಾಲಿಕ ವಿನಾಯಿತಿ ನೀಡಿದೆ’ ಎಂದು ಸಿಬಿಡಿಟಿ ಹೇಳಿದೆ.
‘ಆದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ (2)ರ ಅನ್ವಯ ಪ್ಯಾನ್ ಕಾರ್ಡ್ ಹೊಂದಿರುವವರು ಮತ್ತು ಆಧಾರ್ ಪಡೆಯಲು ಅರ್ಹರಾಗಿರುವವರು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಸಲ್ಲಿಸಲು ಜುಲೈ 1 ರಿಂದ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಅವರ ಪ್ಯಾನ್ ಕಾರ್ಡ್ ಮಾನ್ಯತೆ ಕಳೆದುಕೊಳ್ಳಲಿದೆ’ ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.