ನವದೆಹಲಿ (ಪಿಟಿಐ): ಪಶ್ಚಿಮಬಂಗಾಳಕ್ಕೆ ವಿಶೇಷ ಹಣಕಾಸು ನೆರವಿನ ಪ್ಯಾಕೇಜ್ ಪ್ರಕಟಿಸಬೇಕು ಎಂದು ಒತ್ತಾಯಿಸಿ ಸಂಸತ್ ಭವನದ ಆವರಣದಲ್ಲಿ ಈ ತಿಂಗಳ 15ರಂದು ಧರಣಿ ನಡೆಸಲು ಪಕ್ಷ ತಿರ್ಮಾನಿಸಿರುವುದರಿಂದ ತೃಣಮೂಲ ಕಾಂಗ್ರೆಸ್ನ ಸಚಿವರು ಸೇರಿದಂತೆ ಬಹುತೇಕ ಸಂಸದರು ಮಂಗಳವಾರ ರಾತ್ರಿ ಪ್ರಧಾನಿ ಅವರ ಔತಣಕೂಟದಿಂದ ದೂರ ಉಳಿದರು.
ಏಳು ಜನ ಸಚಿವರೂ ಸೇರಿದಂತೆ 25 ಮಂದಿ ಸಂಸದರಿದ್ದರೂ ರತನ್ ಡೇ ನಾಗ್ ಮಾತ್ರ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ರಸಗೊಬ್ಬರ ಸಬ್ಸಿಡಿ ಕಡಿತ, ಪೆಟ್ರೋಲ್ ಬೆಲೆ ಏರಿಕೆ ಹೀಗೆ ಅನೇಕ ಪ್ರಮುಖ ವಿಚಾರಗಳಲ್ಲಿ ಸರ್ಕಾರದ ಅಂಗವಾಗಿದ್ದುಕೊಂಡೂ ವಿರೋಧ ವ್ಯಕ್ತಪಡಿಸುತ್ತ ಬಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಪ್ರಧಾನಿ ಅವರ ಔತಣಕೂಟದಿಂದ ದೂರ ಉಳಿಯುವ ಮೂಲಕ ಮತ್ತೊಮ್ಮೆ ಮುಜುಗರ ಉಂಟು ಮಾಡಿದೆ.
ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಲೋಕಸಭೆಯಲ್ಲಿ ಆಗ್ರಹಪಡಿಸಿರುವ ತೃಣಮೂಲ ಕಾಂಗ್ರೆಸ್ನ ಸಚೇತಕ ಕಲ್ಯಾಣ ಬ್ಯಾನರ್ಜಿ ಅವರು, ಈ ತಿಂಗಳ 15ರಂದು ಪಕ್ಷದ ಸಂಸದರು ಪಶ್ಚಿಮಬಂಗಾಳಕ್ಕೆ ವಿಶೇಷ ಪ್ಯಾಕೇಜ್ ಒತ್ತಾಯಿಸಿ ಧರಣಿ ನಡೆಸಲಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.