ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್ಇ) ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದೆ.
‘ಸೋರಿಕೆ ಬಹಿರಂಗವಾಗುತ್ತಿದ್ದಂತೆ ಮಂಡಳಿಯು ಆಂತರಿಕ ಪರಿಶೀಲನೆ ಆರಂಭಿಸಿತ್ತು. ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣಾ ಅಧಿಕಾರಿ ಕೆ.ಎಸ್.ರಾಣಾ ಅವರ ಕರ್ತವ್ಯದಲ್ಲಿ ಲೋಪವಾಗಿರುವುದು ಪರಿಶೀಲನೆ ವೇಳೆ ಪತ್ತೆಯಾಯಿತು. ಅವರನ್ನು ಅಮಾನತು ಮಾಡಲಾಗಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
ದೆಹಲಿಯ ಮುಂಗೇಶ್ಪುರದ ‘ಮದರ್ ಖಜಾನಿ ಕಾನ್ವೆಂಟ್’ನ ಶಿಕ್ಷಕರು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ. ಈ ಶಾಲೆ ವಿರುದ್ಧವೂ ತನಿಖೆ ಆರಂಭಿಸಲಾಗಿದೆ. ಪರೀಕ್ಷೆ 10.30ಕ್ಕೆ ಆರಂಭವಾಗಬೇಕಿದ್ದರೂ, 9.10ಕ್ಕೇ ಶಿಕ್ಷಕರಿಗೆ ಪ್ರಶ್ನೆಪತ್ರಿಕೆಗಳ ಕಟ್ಟನ್ನು ಹಸ್ತಾಂತರಿಸಲಾಗಿದೆ. ಬೇರೆ ಪ್ರಶ್ನೆಪತ್ರಿಕೆಗಳನ್ನೂ ನಿಗದಿತ ಸಮಯಕ್ಕಿಂತ ಮೊದಲೇ ಶಿಕ್ಷಕರಿಗೆ ಹಸ್ತಾಂತರಿಸಲಾಗಿತ್ತೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.