ADVERTISEMENT

ಬಂಡಾಯಕ್ಕೆ ಶರದ್‌ ಯಾದವ್‌ ತಲೆದಂಡ: ರಾಜ್ಯಸಭಾ ನಾಯಕ ಸ್ಥಾನದಿಂದ ವಜಾ

ಪಿಟಿಐ
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST
ಶರದ್‌ ಯಾದವ್
ಶರದ್‌ ಯಾದವ್   

ನವದೆಹಲಿ : ನಿರ್ಣಾಯಕ ಹಂತಕ್ಕೆ ತಲುಪಿರುವ ಬಿಹಾರ ಜೆಡಿಯು ಆಂತರಿಕ ಭಿನ್ನಮತಕ್ಕೆ ಪಕ್ಷದ ಹಿರಿಯ ನಾಯಕ ಶರದ್‌ ಯಾದವ್‌ ಬೆಲೆ ತೆತ್ತಿದ್ದಾರೆ.

ಶನಿವಾರ ನಡೆದ ಹಠಾತ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಶರದ್‌ ಯಾದವ್‌ ಅವರನ್ನು ರಾಜ್ಯಸಭೆಯ ಜೆಡಿಯು ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ. ಅವರು ಬಿಹಾರಕ್ಕೆ ತೆರಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅವರ ಸ್ಥಾನಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಬಲಗೈ ಬಂಟ ಎಂದು ಗುರುತಿಸಿಕೊಂಡಿರುವ ಆರ್‌.ಸಿ.ಪಿ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ.  ರಾಜ್ಯಸಭೆಯಲ್ಲಿ ಜೆಡಿಯು 10 ಸದಸ್ಯ ಬಲ ಹೊಂದಿದೆ.

ADVERTISEMENT

ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಜೆಡಿಯು ಸಂಸದರು ಆರ್‌.ಪಿ.ಸಿ ಸಿಂಗ್‌ ಅವರನ್ನು ರಾಜ್ಯಸಭೆಯ ಜೆಡಿಯುನ ಹೊಸ ನಾಯಕನನ್ನಾಗಿ ಆಯ್ಕೆ ಮಾಡಿದ ಪತ್ರವನ್ನು ಸಲ್ಲಿಸಿದರು.

ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆಗಿನ ಮಹಾಮೈತ್ರಿ ತೊರೆದು ಎನ್‌ಡಿಎ ತೆಕ್ಕೆಗೆ ಸೇರಿದ ನಿತೀಶ್‌ ಕುಮಾರ್‌ ಅವರ ನಿಲುವನ್ನು ಶರದ್‌ ಯಾದವ್‌ ಬಹಿರಂಗವಾಗಿ ಟೀಕಿಸಿದ್ದರು. ಈ ಬೆಳವಣಿಗೆಯ ನಂತರ ಇಬ್ಬರು ನಾಯಕರು ಮುನಿಸಿಕೊಂಡಿದ್ದರು. ಶರದ್‌  ವಿರೋಧ ಪಕ್ಷಗಳ ಜತೆ ಗುರುತಿಸಿಕೊಂಡಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

‘ನನ್ನದು ನೈಜ ಜೆಡಿಯು, ನಿತೀಶ್‌ ಜತೆಗಿರುವುದು ಸರ್ಕಾರಿ ಜೆಡಿಯು’

ಸದ್ಯ ಬಿಹಾರದಲ್ಲಿರುವ ಯಾದವ್‌ ಈ ಹಠಾತ್‌ ಬೆಳವಣಿಗೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮೂಲ ಹಾಗೂ ನೈಜ ಜೆಡಿಯು ಇನ್ನೂ ನನ್ನೊಂದಿಗೆ ಇದೆ. ನಿತೀಶ್‌ ಕುಮಾರ್‌ ಜತೆಗಿರುವುದು ಸರ್ಕಾರಿ ಜೆಡಿಯು ಎಂದು ಹೇಳಿದ್ದಾರೆ. ತಾವಿನ್ನೂ ಆರ್‌ಜೆಡಿ, ಕಾಂಗ್ರೆಸ್ ಮಹಾಮೈತ್ರಿ ಭಾಗವಾಗಿರುವುದಾಗಿ ಅವರು ಸ್ಪಷ್ಟಪಡಿಸಿದರು.

‌ಮತ್ತೊಬ್ಬ ಸಂಸದ ವಜಾ

ಈ ನಡುವೆ ಶುಕ್ರವಾರ ರಾತ್ರಿ ನಡೆದ ಮತ್ತೊಂದು ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದ ಸಭೆಗೆ ಹಾಜರಾದ ಜೆಡಿಯುನ ಮತ್ತೊಬ್ಬ ನಾಯಕ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನಿಯಾ ಸಭೆಗೆ ಹಾಜರಾದ ರಾಜ್ಯಸಭಾ ಸದಸ್ಯ ಅಲಿ ಅನ್ವರ್‌ ಅವರನ್ನು ಜೆಡಿಯು  ಸಂಸದೀಯ ಪಕ್ಷದಿಂದ ವಜಾ ಮಾಡಿದೆ.

* ಜೆಡಿಯು ನಿತೀಶ್‌ ಕುಮಾರ್‌ ಅವರ ಸ್ವಂತ ಆಸ್ತಿ ಅಲ್ಲ, ಅವರು ಪಕ್ಷದ ಒಂದು ಭಾಗ ಮಾತ್ರ

– ಶರದ್‌ ಯಾದವ್, ಜೆಡಿಯು ಹಿರಿಯ ಮುಖಂಡ

ನಿತೀಶ್‌ಗೆ ಎನ್‌ಡಿಎ ಸಂಚಾಲಕ ಸ್ಥಾನ ಸಾಧ್ಯತೆ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಕೇಂದ್ರದ ಆಡಳಿತಾರೂಢ ಮೈತ್ರಿಕೂಟವಾದ ಎನ್‌ಡಿಎ ಸೇರುವ ನಿರ್ಧಾರವನ್ನು ಇದೇ 19ರಂದು ನಡೆಯುವ ಜೆಡಿಯು ಕಾರ್ಯಕಾರಿ ಸಭೆಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಬಳಿಕ ಎನ್‌ಡಿಎ ಸಂಚಾಲಕ ಸ್ಥಾನಕ್ಕೆ ನಿತೀಶ್‌ ಅವರ ನೇಮಕ ಆಗಬಹುದು ಎಂದು ಜೆಡಿಯು ಮುಖಂಡರು ಹೇಳಿ
ದ್ದಾರೆ. ಸಮತಾ ಪಕ್ಷ ಮತ್ತು ಜೆಡಿಯು ಮುಖಂಡರಾಗಿದ್ದ ಜಾರ್ಜ್‌ ಫರ್ನಾಂಡಿಸ್‌ ಮತ್ತು ಶರದ್‌ ಯಾದವ್‌ ಅವರಿಗೆ ಹಿಂದೆ ಈ ಹುದ್ದೆ ನೀಡಲಾಗಿತ್ತು. 2014ರ ಲೋಕಸಭಾ ಚುನಾವಣೆ ನಂತರ ಎನ್‌ಡಿಎಗೆ ಸಂಚಾಲಕರೇ ಇಲ್ಲ. ‌

ಎನ್‌ಡಿಎಗೆ ಸೇರುವಂತೆ ನಿತೀಶ್‌ ಅವರಿಗೆ ಆಹ್ವಾನ ನೀಡಿದ್ದಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಈಗಾಗಲೇ ಹೇಳಿದ್ದಾರೆ. ಷಾ ಅವರ ಆಹ್ವಾನ ಔಪಚಾರಿಕತೆ ಮಾತ್ರ. ಯಾಕೆಂದರೆ ಎನ್‌ಡಿಎ ಬೆಂಬಲದಲ್ಲಿ ನಿತೀಶ್‌ ಅವರು ಬಿಹಾರದಲ್ಲಿ ಸರ್ಕಾರ ರಚಿಸಿದ್ದಾರೆ. ಎನ್‌ಡಿಎಗೆ ಜೆಡಿಯು ಸೇರ್ಪಡೆಯ ನಂತರ, ಜೆಡಿಯುಗೆ ಕೇಂದ್ರದಲ್ಲಿ ಒಂದು ಸಂಪುಟ ದರ್ಜೆ ಮತ್ತು ಒಂದು ರಾಜ್ಯ ದರ್ಜೆಯ ಸಚಿವ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ.

ಕಸಭೆಯಲ್ಲಿ ಎರಡು ಮತ್ತು ರಾಜ್ಯಸಭೆಯಲ್ಲಿ ಒಂಬತ್ತು ಸದಸ್ಯರನ್ನು ಜೆಡಿಯು ಹೊಂದಿದೆ. ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಬಿಜೆಪಿಗೆ ಜೆಡಿಯು ಬೆಂಬಲ ಮಹತ್ವದ್ದಾಗಿದೆ.

ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಎನ್‌ಡಿಎಗೆ ಜಾರ್ಜ್ ಫರ್ನಾಂಡಿಸ್‌ ಸಂಚಾಲಕರಾಗಿದ್ದರು. ಎನ್‌ಡಿಎ ವಿರೋಧ ಪಕ್ಷದಲ್ಲಿದ್ದಾಗ ಶರದ್‌ ಯಾದವ್‌ ಸಂಚಾಲಕರಾಗಿದ್ದರು. ನಿತೀಶ್‌ ಅವರು 17 ವರ್ಷ ಎನ್‌ಡಿಎ ಜತೆಗಿದ್ದರು. 2013ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಎನ್‌ಡಿಎ ಜತೆಗಿನ ಸಂಬಂಧ ಕಡಿದುಕೊಂಡರು. ಈಗ ನಿತೀಶ್‌ ಮತ್ತೆ ಎನ್‌ಡಿಎ ಮಡಿಲಿಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.