ADVERTISEMENT

ಬಂದ್: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ಶ್ರೀನಗರ (ಪಿಟಿಐ): ದಸ್ತಗೀರ್ ಸಾಹಿಬ್ ಪ್ರಾರ್ಥನಾ ಸ್ಥಳ ಅಗ್ನಿಗೆ ಆಹುತಿಯಾಗಿರುವುದಕ್ಕೆ ಆಕ್ರೋಶಗೊಂಡು ಪ್ರತ್ಯೇಕತಾವಾದಿ ಗುಂಪು ಮಂಗಳವಾರ ಇಲ್ಲಿ ಕರೆದಿದ್ದ ಬಂದ್‌ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಹುರಿಯತ್ ಕಾನ್ಫ್‌ರೆನ್ಸ್ ಹಾಗೂ ಜೆಕೆಎಲ್‌ಎಫ್ ಸೇರಿದಂತೆ ಹೆಚ್ಚಿನ ಎಲ್ಲಾ ಪ್ರತ್ಯೇಕತಾವಾದಿಗಳು ಈ ಬಂದ್‌ನಲ್ಲಿ ಭಾಗವಹಿಸಿದ್ದು, ಶಾಲೆ, ಕಾಲೇಜು, ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಅಲ್ಲದೆ ಕೆಲವು ಖಾಸಗಿ ವಾಹನಗಳ ಓಡಾಟವನ್ನು ಹೊರತುಪಡಿಸಿ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತ್ತು .

ಪರಿಶೀಲನೆ:  ಪ್ರಸಿದ್ಧ ಪ್ರಾರ್ಥನಾ ಸ್ಥಳ ದಸ್ತಗೀರ್ ಸಾಹಿಬ್ ಅಗ್ನಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿರುವ ಪ್ರಮುಖ ಪ್ರಾರ್ಥನಾ ಸ್ಥಳಗಳಲ್ಲಿ `ಅಗ್ನಿ ನಿರೋಧಕ ಕ್ರಮ~ ಅಳವಡಿಸಿರುವ ಬಗ್ಗೆ ತಪಾಸಣೆ ನಡೆಸಲು ಜಮ್ಮು ಕಾಶ್ಮೀರ ಸರ್ಕಾರ ತಜ್ಞರ ತಂಡವನ್ನು ನಿಯೋಜಿಸಲಿದೆ.

`ಪ್ರಮುಖ ಪ್ರಾರ್ಥನಾ ಮಂದಿರಗಳಲ್ಲಿ ಸೂಕ್ತ ಅಗ್ನಿ ನಿರೋಧಕ ಕ್ರಮ ಅಳವಡಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಶೀಘ್ರದಲ್ಲೇ ತಪಾಸಣೆ ಕೈಗೊಳ್ಳಲಾಗುವುದು~ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಅಸ್ಗರ್ ಸಮೂನ್  ನೇತೃತ್ವದ ಸಭೆಯಲ್ಲಿ ಭಾಗವಹಿಸಿದ ನಂತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಸೋಮವಾರ ಸಂಭವಿಸಿದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ  ಸಮೂನ್ ನೇತೃತ್ವ ತಂಡ ತನಿಖೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.