ಚೆನ್ನೈ (ಪಿಟಿಐ): ನಿಗೂಢವಾಗಿ ಸಾವಿಗೀಡಾಗಿದ್ದ ಕೇಂದ್ರದ ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ. ರಾಜಾ ಅವರ ನಿಕಟ ಸಹಚರ ಸಾದಿಕ್ ಬಚ್ಚ ಅವರು ಉಸಿರುಗಟ್ಟಿ ಮೃತರಾಗಿದ್ದಾರೆ ಎಂದು ಶವಪರೀಕ್ಷೆ ನಡೆಸಿದ ವೈದ್ಯರು ಗುರುವಾರ ಇಲ್ಲಿ ತಿಳಿಸಿದ್ದಾರೆ.
~ಶವಪರೀಕ್ಷೆಯ ವರದಿಯು ಇನ್ನು ಎರಡು ವಾರಗಳಲ್ಲಿ ಸಿದ್ಧಗೊಳ್ಳಲಿದೆ. ಈಗಲೇ ಇದು ಆತ್ಮಹತ್ಯೆಯೊ ಅಥವಾ ಕೊಲೆಯೊ ಎಂಬುದನ್ನು ನಿಖರವಾಗಿ ಹೇಳಲಾಗದು~ ಎಂದು ಡಾ. ವಿ. ಡೇಕಲ್ ಅವರು ತಿಳಿಸಿದ್ದಾರೆ.
~ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರುವವರೆಗೆ ಅವರ ಸಾವಿಗೆ ಇದೇ ಕಾರಣ ಎಂಬ ನಿರ್ಣಯಕ್ಕೆ ಬರಲಾಗದು. ಬಚ್ಚ ಶವಪರೀಕ್ಷೆಯನ್ನು ಸಂಪೂರ್ಣವಾಗಿ ವಿಡಿಯೊ ಚಿತ್ರಿಕರಿಸಲಾಗಿದೆ~ ಎಂದು ವೈದ್ಯರು ವರದಿಗಾರರಿಗೆ ಅವರು ತಿಳಿಸಿದರು.
ವೈದ್ಯರ ತಂಡವು ಇಲ್ಲಿನ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸತತವಾಗಿ ಮೂರು ಗಂಟೆಯ ವರೆಗೆ ಬಚ್ಚ ಶವಪರಿಕ್ಷೆಯನ್ನು ನಡೆಸಿತು. ಶವಪರೀಕ್ಷೆ ನಂತರ ವೈದರು ಶವವನ್ನು ಬಚ್ಚ ಸಂಬಂಧಿಕರಿಗೆ ಹಸ್ತಾಂತರಿಸಿದರು.
2 ಜಿ ಸ್ಪೆಕ್ಟ್ರಂ ಹಗರಣದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಎ ರಾಜಾ ಅವರ ನಿಕಟವರ್ತಿಯಾಗಿದ್ದ ಬಚ್ಚ ಅವರನ್ನು ಸಿಬಿಐ ನಾಲ್ಕು ಬಾರಿ ತನಿಖೆಗೆ ಒಳಪಡಿಸಿತ್ತು. ಅವರಿಗೆ ಸೇರಿದ್ದ ಗ್ರೀನ್ ಹೌಸ್ ಪ್ರಮೋಟರ್ಸ್ ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆಸಿತ್ತು. ಮಾಧ್ಯಮಗಳಲ್ಲಿ ಈ ಕುರಿತು ಬಂದ ವಿಸ್ತ್ರತ ವರದಿಗಳಿಂದ ಮುಜಗರ ಉಂಟಾಗಿ ತಾವು ಅತ್ಮಹತ್ಯೆ ಮಾಡಿಕೊಂಡಿದ್ದಾಗಿ ಅವರು ಚೀಟಿ ಬರೆದಿಟ್ಟಿದ್ದರು. ರಾಜ್ಯ ಸರ್ಕಾರ ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.