ಲಖನೌ: ಆನಂದ್ ಕುಮಾರ್ ಎಂಬುವವರು ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿದ್ದು, ತಾವು ಕಳೆದ ಮೂರು ದಿನಗಳಿಂದ ಗಂಗೋತ್ರಿ ಹಾಗೂ ಉತ್ತರಕಾಶಿಯ ನಡುವೆ ಸಿಲುಕಿಕೊಂಡಿದ್ದು, ಆಹಾರದ ಪೊಟ್ಟಣಗಳಿಗಾಗಿ ಅಲೆದಾಡಬೇಕಾಗಿದೆ ಎಂದು ತಮ್ಮ ದುಃಖ ತೋಡಿಕೊಂಡಿದ್ದು, ತಮ್ಮನ್ನು ಅಲ್ಲಿಂದ ರಕ್ಷಿಸುವಂತೆ ಕೇಳಿಕೊಂಡಿದ್ದಾರೆ.
ಹೀಗೆ ಉತ್ತರಾಖಂಡ ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಬದುಕುಳಿದಿರುವ ಅನೇಕರು ತಮ್ಮ ಹತ್ತಿರದ ಆತ್ಮೀಯರು ಹಾಗೂ ಸಂಬಂಧಿಗಳೊಂದಿಗೆ ಮಾತನಾಡುವಾಗ ತಮಗಾದ ಘೋರ ಅನುಭವಗಳ ಕುರಿತು ವಿವರಣೆ ನೀಡಿದ್ದಾರೆ.
70 ಮಂದಿ ಬದುಕುಳಿದಿದ್ದು, ನೂರಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಅನೇಕ ಬದುಕುಳಿದವರು ಯಾತ್ರಿಗಳು ಸಾಯುವುದನ್ನು ಕಣ್ಣಾರೆ ಕಂಡಿದ್ದಾರೆ. ಆಕಾಶ್ ಕುಮಾರ್ ಎಂಬುವವರು ಗೌರಿಕುಂಡದ ಬಳಿ ಕಂದಕಕ್ಕೆ ಬಾಲಕಿಯೊಬ್ಬಳು ಜಾರಿ ಬೀಳುತ್ತಿರುವುದನ್ನು ಕಣ್ಣಾರೆ ನೋಡಿದೆ ಎಂದು ಹೇಳಿಕೊಂಡಿದ್ದಾರೆ.
ಅನೇಕರು ಬೇರೆ ಬೇರೆ ಬೆಟ್ಟಗಳ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಮನೆಗಳಿಗೆ ತಲುಪುವ ಆಸೆಯನ್ನೇ ಬಿಟ್ಟಿದ್ದಾರೆ. ಅವರೆಲ್ಲರೂ ಪ್ರಕೃತಿಯ ಕರುಣೆಗಾಗಿ ಕಾಯುತ್ತಿದ್ದಾರೆ. ಹವಾಮಾನ ಸಹಜ ಸ್ಥಿತಿಗೆ ಮರಳಿದರೆ ತಮ್ಮ `ಛಾತ್ರಧಾಮ ಯಾತ್ರೆ'ಯನ್ನು (ಬದರೀನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ)ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.