ADVERTISEMENT

ಬಲಪ್ರಯೋಗ ಸಮರ್ಥಿಸಿಕೊಂಡ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ನವದೆಹಲಿ (ಐಎಎನ್‌ಎಸ್): ಬಾಬಾ ರಾಮ್‌ದೇವ್ ಅವರು ಆರ್‌ಎಸ್‌ಎಸ್‌ನ ಇನ್ನೊಂದು ಮುಖ ಎಂದು ಹೇಳಿರುವ ಸರ್ಕಾರ, ಸತ್ಯಾಗ್ರಹವನ್ನು ಬಲಪ್ರಯೋಗ ಮಾಡಿ ನಿಲ್ಲಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಅವರು ಇದೇ ಪ್ರಥಮ ಬಾರಿಗೆ ಸರ್ಕಾರದ ಕ್ರಮವನ್ನು ಸಮರ್ಥಿಸಿ ಮಾತನಾಡಿ, `ರಾಮ್‌ದೇವ್ ಅವರು ಆರ್‌ಎಸ್‌ಎಸ್‌ನ ಇನ್ನೊಂದು ಮುಖ ಎಂಬುದು ಈಗ ಸ್ಪಷ್ಟವಾಗಿದೆ~ ಎಂದು ಹೇಳಿದರು.

ಐದು ಸಾವಿರ ಜನರಿಗೆ ಯೋಗ ಶಿಬಿರ ನಡೆಸುತ್ತೇನೆ ಎಂದಿದ್ದ ಬಾಬಾ ಅವರು ಅಲ್ಲಿಗೆ 50 ಸಾವಿರ ಜನರನ್ನು ಏಕೆ ಕರೆಸಿದ್ದರು ಎಂದು ಪ್ರಶ್ನಿಸಿದರು.

ರಾಮ್‌ದೇವ್ ಅವರನ್ನು ದೆಹಲಿಯಿಂದ ಹೊರಗೆ ಕಳುಹಿಸಿದ ನಂತರ ನಡೆಯಬಹುದಾದ ಯಾವುದೇ ಘಟನೆಯನ್ನು ನಿಯಂತ್ರಿಸುವ ವಿಶ್ವಾಸ ಸರ್ಕಾರಕ್ಕೆ ಇದೆ ಎಂದ ಅವರು, ಯೋಗ ಗುರುವಿನ ಜತೆ ನಡೆಸಿದ ಮಾತುಕತೆಯ ವಿವರ ನೀಡಲು ನಿರಾಕರಿಸಿದರು.

ಸತ್ಯಾಗ್ರಹದ ಸ್ಥಳದಲ್ಲಿ ಸಾಧ್ವಿ ರಿತಾಂಬರ ಅವರು ಹಾಜರಿದ್ದುದು ಬಾಬಾ ಅವರಿಗೆ ಆರ್‌ಎಸ್‌ಎಸ್ ಬೆಂಬಲ ನೀಡಿರುವುದಕ್ಕೆ ಸಾಕ್ಷಿಯಾಗಿದೆ. ಬಾಬಾ ಅವರು ಸರ್ಕಾರ ಮತ್ತು ಬೆಂಬಲಿಗರಿಗೆ ಮೋಸ ಮಾಡಿರುವುದರಿಂದ ನಂಬಿಕೆಗೆ ಅನರ್ಹರು ಎಂದು ಟೀಕಿಸಿದರು.

ಸರ್ಕಾರದ ಜತೆ ಒಂದು ಒಪ್ಪಂದಕ್ಕೆ ಬಂದಿದ್ದ ಬಾಬಾ ಆ ವಿಚಾರವನ್ನು ಬೆಂಬಲಿಗರಿಗೆ ತಿಳಿಸಿರಲಿಲ್ಲ.

ಸರ್ಕಾರ ಮತ್ತು ಬಾಬಾ ಮಧ್ಯೆ ಒಂದು ಒಡಂಬಡಿಕೆ ಏರ್ಪಟ್ಟಿತ್ತು. ಅದರ ಪ್ರಕಾರ ಸಂಜೆಯ ವೇಳೆಗೆ ಬಾಬಾ ಸತ್ಯಾಗ್ರಹವನ್ನು ನಿಲ್ಲಿಸಬೇಕಾಗಿತ್ತು. ಆದರೆ ಅವರು ಮಾತು ಕೊಟ್ಟಂತೆ ನಡೆದುಕೊಳ್ಳಲಿಲ್ಲ. ಐದು ಗಂಟೆಯವರೆಗೂ ನಾವು ದೂರವಾಣಿ ಮೂಲಕ ಬಾಬಾ ಅವರನ್ನು ಸಂಪರ್ಕಿಸುತ್ತಾ ಇದ್ದೆವು. ಆದರೆ ಅವರು ಕೊಟ್ಟ ಮಾತಿನಂತೆ ನಿರಶನ ನಿಲ್ಲಿಸಲಿಲ್ಲ. ಆದ್ದರಿಂದ ಸತ್ಯಾಗ್ರಹ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.