ಯವತಮಲ್, ಮಹಾರಾಷ್ಟ್ರ: ಇಲ್ಲಿನ ಶಿಂಧೆ ನಗರ ಪ್ರದೇಶದ ದೇವಸ್ಥಾನದ ಆವರಣದಲ್ಲಿರುವ ಬಾವಿ ಸ್ವಚ್ಛಗೊಳಿಸುವ ವೇಳೆ ಅದರಲ್ಲಿ ಸುರಿಯಲಾಗಿದ್ದ ನೂರಾರು ಆಧಾರ್ ಕಾರ್ಡ್ ಪತ್ತೆಯಾಗಿವೆ.
ಜಿಲ್ಲಾಡಳಿತ ಈ ಸಂಬಂಧ ತನಿಖೆಗೆ ಆದೇಶಿಸಿದೆ. ವರದಿ ನೀಡುವಂತೆ ತಹಶೀಲ್ದಾರ್ ಅವರಿಗೆ ಯವತಮಲ್ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅವಧೂತವಾಡಿ ಪೊಲೀಸ್ ಠಾಣೆಯಲ್ಲಿ ಅಂಚೆ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಾರ್ಚ್ 11ರಂದು ಯುವಕರ ಗುಂಪು ಬಾವಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು. ಈ ವೇಳೆ ಆಧಾರ್ ಕಾರ್ಡ್ಗಳಿದ್ದ ಪ್ಲಾಸ್ಟಿಕ್ ಚೀಲ ಸಿಕ್ಕಿತ್ತು. ನಗರದ ಹೊರಭಾಗದಲ್ಲಿರುವ ಲೋಹರಾ ಗ್ರಾಮದ ನಿವಾಸಿಗಳಿಗೆ ಸೇರಿದವು ಎನ್ನಲಾದ ಆಧಾರ್ ಕಾರ್ಡ್ಗಳ ಮೂಲಪ್ರತಿಗಳು ಚೀಲದಲ್ಲಿದ್ದವು. ಈ ಪೈಕಿ 157 ಕಾರ್ಡ್ಗಳು ಭಾಗಶಃ ಹಾನಿಗೊಂಡಿವೆ.
ನಗರದಲ್ಲಿ ಪಾಳುಬಿದ್ದ ಇತರೆ ಬಾವಿಗಳಲ್ಲಿಯೂ ಇಂತಹ ಕಾರ್ಡ್ಗಳು ಇವೆಯೇ ಎಂದು ಶೋಧಿಸುವಂತೆ ಪುರಸಭೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದ್ದಾರೆ.
**
ನಿರ್ಲಕ್ಷ್ಯದಿಂದ ಕೃತ್ಯ ಎಸಗಿದವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ
ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.