ನವದೆಹಲಿ (ಪಿಟಿಐ): ಸಲಹಾ ಸಂಸ್ಥೆ ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡವು ಗುರುವಾರ ಬಿಇಎಂಎಲ್ ಅಧ್ಯಕ್ಷ ವಿ.ಆರ್. ಎಸ್. ನಟರಾಜನ್ ಅವರ ನಿವಾಸ ಸೇರಿದಂತೆ ವಿವಿಧೆಡೆಯಲ್ಲಿ ತಪಾಸಣೆಯನ್ನು ನಡೆಸಿತು.
ಗುರುವಾರ ಬೆಳಿಗ್ಗೆ ನಟರಾಜನ್ ಅವರ ಮನೆಯಲ್ಲಿ ಶೋಧನಾ ಕಾರ್ಯಾಚರಣೆಯನ್ನು ಕೈಗೊಂಡ ಸಿಬಿಐ ಅಧಿಕಾರಿಗಳ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿತು.
ಬೆಂಗಳೂರು ಮತ್ತು ಕೊಯಂಬತ್ತೂರಿನ ವಿವಿಧ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳ ತಂಡವು ಶೋಧನೆಯನ್ನು ನಡೆಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಸಲಹಾ ಸಂಸ್ಥೆ ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚು ಅಕ್ರಮ ನಡೆದಿದ್ದು, ಇದರಲ್ಲಿ ನಟರಾಜನ್ ಅವರು ಭಾಗಿಯಾಗಿದ್ದಾರೆ ಎನ್ನುವ ಆರೋಪದ ಅಡಿಯಲ್ಲಿ ಸಿಬಿಐ ಅಧಿಕಾರಿಗಳ ತಂಡವು ಈ ತಪಾಸಣೆಯನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸೇನೆಗೆ ಟಟ್ರಾ ಟ್ರಕ್ ಪೂರೈಸುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗಾಗಲೇ ನಟರಾಜನ್ ಅವರನ್ನು ಈ ಹಿಂದೆ ವಿಚಾರಣೆಗೆ ಒಳಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.