ADVERTISEMENT

ಬಿಜೆಪಿ–ಎಎಪಿ ಕಾರ್ಯಕರ್ತರ ನಡುವೆ ಘರ್ಷಣೆ

ಕೇಜ್ರಿವಾಲ್‌ ಬಂಧನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ಲಖನೌ/ನವದೆಹಲಿ (ಪಿಟಿಐ/ ಐಎಎನ್‌ಎಸ್‌): ಗುಜರಾತ್ ಪ್ರವಾಸ ಕೈಗೊಂಡಿದ್ದ ದೆಹಲಿ ಮಾಜಿ ಮುಖ್ಯ­ಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಬಿಜೆಪಿ ಹಾಗೂ ಎಎಪಿ ಕಾರ್ಯಕರ್ತರ ನಡುವೆ ಬುಧವಾರ ಲಖನೌ ಹಾಗೂ ನವದೆಹಲಿಯಲ್ಲಿ ಘರ್ಷಣೆ ಉಂಟಾ­ಯಿತು.

ಲಖನೌ ವಿಧಾನಸಭಾ ಮಾರ್ಗದಲ್ಲಿ­ರುವ ಬಿಜೆಪಿಯ ಕೇಂದ್ರ ಕಚೇರಿ ಮುಂದೆ ಎಎಪಿ ಕಾರ್ಯಕರ್ತರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ ವೇಳೆ ಬಿಜೆಪಿ–ಎಎಪಿ ಕಾರ್ಯ­ಕರ್ತರ ನಡುವೆ ಘರ್ಷಣೆಯಾಯಿತು.

ಬಿಜೆಪಿ ಕಚೇರಿ ಮೇಲೆ ಎಎಪಿ ಕಾರ್ಯಕರ್ತರು ಇಟ್ಟಿಗೆ ತೂರಿದಾಗ, ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯ­ಕರ್ತರು ಲಾಠಿ ಹಾಗೂ ಕಬ್ಬಿನ ಜಲ್ಲೆಗಳ ಮೂಲಕ ರಸ್ತೆಯಲ್ಲೇ ಘರ್ಷಣೆಗೆ ಇಳಿದರು.

ಘಟನೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರನ್ನು ಥಳಿಸಿ­ದರು. ಕೆಲ ಕಾರ್ಯಕರ್ತರ ಬಟ್ಟೆ ಹರಿ­ದರೆ, ಇನ್ನು ಕೆಲ ಕಾರ್ಯಕರ್ತರ ಮೇಲೆ ತೀವ್ರ ಹಲ್ಲೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಎಎಪಿಯ ರಾಷ್ಟ್ರೀಯ ಮಂಡಳಿ ಸದಸ್ಯೆ ವೈಭವ್‌ ಮಹೇಶ್ವರಿ ಮಾತನಾಡಿ, ‘ನಮ್ಮ ಪಕ್ಷದ ಕಾರ್ಯಕರ್ತರು  ಶಾಂತಿ­ಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಬಿಜೆಪಿ ಕಾರ್ಯಕರ್ತರು ಕಚೇರಿಯ ಒಳಗಿನಿಂದಲೇ ಏಕಾಏಕಿ ನಮ್ಮ ಮೇಲೆ ಇಟ್ಟಿಗೆ ತೂರಿದರು’ ಎಂದು ಆರೋಪಿಸಿದ್ದಾರೆ.

ಘಟನೆಯಲ್ಲಿ ಎಎಪಿ ಕಾರ್ಯ­ಕರ್ತ­ರೊಬ್ಬರು ಗಂಭೀರವಾಗಿ ಗಾಯ­ಗೊಂಡಿದ್ದು, ಇನ್ನೂ ಐವರಿಗೆ ತೀವ್ರ ಗಾಯ­ಗಳಾಗಿವೆ ಎಂದು ಅವರು ದೂರಿದರು.

ಬಿಜೆಪಿ ವಕ್ತಾರ ವಿಜಯ್‌ ಪಾಠಕ್ ಮಾತನಾಡಿ, ಬಿಜೆಪಿ ಕಚೇರಿಯ ಹೊರಗೆ ನಿಂತಿದ್ದ ಕಾರ್ಯಕರ್ತರ ಮೇಲೆ ಎಎಪಿ ಕಾರ್ಯಕರ್ತರು ಇಟ್ಟಿಗೆ ತೂರಿ ದಾಳಿ ಮಾಡಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ಹೇಳಿದ್ದಾರೆ.
ಈ ಮಧ್ಯೆ ಹಿಂಸಾಚಾರದ ಬಗ್ಗೆ ಕೇಜ್ರಿವಾಲ್‌ ವಿಷಾದ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.