ADVERTISEMENT

ಬಿಜೆಪಿ ವರದಿಯಲ್ಲಿ ಸೋನಿಯಾ: ಅಡ್ವಾಣಿ ವಿಷಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:25 IST
Last Updated 18 ಫೆಬ್ರುವರಿ 2011, 10:25 IST

ನವದೆಹಲಿ (ಪಿಟಿಐ): ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವವರಲ್ಲಿ ಸೋನಿಯಾಗಾಂಧಿಯೂ ಕೂಡ ಒಬ್ಬರು ಎಂಬ ಬಿಜೆಪಿ ಕಾರ್ಯಪಡೆ ವರದಿಗೆ ಅಡ್ವಾಣಿ ಅವರು ವಿಷಾದ ಸೂಚಿಸಿದ್ದಾರೆ.

ಬಿಜೆಪಿ ನೇಮಿಸಿದ್ದ ಕಾರ್ಯಪಡೆ   ದಿವಂಗತ ರಾಜೀವ್ ಗಾಂಧಿ ಹಾಗೂ ಅವರ ಪತ್ನಿ ಸೋನಿಯಾ ಗಾಂಧಿ ಅವರು ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟಿದ್ದಾರೆ ಎಂದು  ವರದಿ ನೀಡಿತ್ತು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ತಾವಾಗಲಿ ತಮ್ಮ ಕುಟುಂಬದ ಸದಸ್ಯರಾಗಲಿ ಯಾವುದೇ ವಿಧವಾದ ಕಪ್ಪುಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿಲ್ಲ ಎಂದು ಅಡ್ವಾಣಿಗೆ ಪತ್ರ ಬರೆದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಅಡ್ವಾಣಿ ಅವರು ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬದ ಸದಸ್ಯರ ಹೆಸರುಗಳು ವರದಿಯಲ್ಲಿ ಪ್ರಸ್ತಾವವಾದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ಹೆಸರುಗಳು ಪ್ರಸ್ತಾಪವಾಗುತ್ತಿದ್ದಾಗಲೇ ಸೋನಿಯಾ ಅವರು ಸಾರ್ವಜನಿಕ ನಿರಾಕರಣೆ ನೀಡಬಹುದಿತ್ತು. ಹಾಗೆ ಮಾಡಿದ್ದರೆ ವರದಿಯಲ್ಲಿ ಅವರ ಹೆಸರುಗಳು ಸೇರುತ್ತಿರಲೇ ಇಲ್ಲ~ ಎಂದು ಅಡ್ವಾಣಿ ಹೇಳಿದ್ದಾರೆ.

ಎಸ್. ಗುರುಮೂರ್ತಿ, ಮಾಜಿ ಗುಪ್ತಚರ ಅಧಿಕಾರಿ ಅಜಿತ್ ದೊವಲ್, ಪ್ರೋ. ಆರ್. ವೈದ್ಯನಾಥನ್ ಹಾಗೂ ವಕೀಲರಾದ ಮಹೇಶ್ ಜೇಠ್ಮಲಾನಿ ಅವರನ್ನೊಳಗೊಂಡ ಕಾರ್ಯಪಡೆಯನ್ನು ಬಿಜೆಪಿ ಕಪ್ಪುಹಣ ಪತ್ತೆಗಾಗಿಯೇ ನೇಮಿಸಿತ್ತು. ಹಾಗೂ ಇದು 25 ಲಕ್ಷ ಕೋಟಿ ರೂಗಳಷ್ಟು ಹಣವನ್ನು ಭಾರತೀಯರು ವಿದೇಶಗಳಲ್ಲಿ ಇಟ್ಟಿದ್ದಾರೆ ಎಂದು ವರದಿ ನೀಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.