ಮುಂಬೈ (ಪಿಟಿಐ): ಮಹಾರಾಷ್ಟ್ರ ಬಿಜೆಪಿ ಶಾಸಕರು ಮಂಗಳವಾರ (ಅ.೨೮) ಸಭೆ ಸೇರಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
‘ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಮುಖ್ಯಮಂತ್ರಿ ಆಯ್ಕೆಗಾಗಿ ಅಂದು ಬೆಳಿಗ್ಗೆ ೧೧ ಗಂಟೆಗೆ ವಿಧಾನ ಭವನದಲ್ಲಿ ಸಭೆ ಆರಂಭವಾಗಲಿದೆ’ ಎಂದು ಪಕ್ಷದ ಹಿರಿಯ ಮುಖಂಡ ಏಕನಾಥ್್ ಖಾಡ್ಸೆ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ, ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಖಾಡ್ಸೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಹಾಗೂ ಪಕ್ಷದ ಹಿರಿಯ ಮುಖಂಡ ವಿನೋದ್ ತಾವ್ಡೆ ಅವರು ಭಾನುವಾರ ಬೆಳಿಗ್ಗೆ ಸಭೆ ಸೇರಿ ಚರ್ಚಿಸಿದರು.
ಅ.೨೮ರಂದು ನಡೆಯುವ ಸಭೆಯಲ್ಲಿ ಗೃಹ ಸಚಿವ ರಾಜನಾಥ್್ ಸಿಂಗ್್ ಮತ್ತು ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿ ಜೆ.ಪಿ.ನಡ್ಡಾ ಅವರು ವೀಕ್ಷಕರಾಗಿ ಭಾಗವಹಿಸುವರು.
ಪ್ರತಿಪಕ್ಷವಾಗಲು ಒತ್ತಾಯ: ಶಿವಸೇನಾವು ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳದೇ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕು ಎಂದು ಹಿರಿಯ ಪತ್ರಕರ್ತ, ಪಕ್ಷದ ಮಾಜಿ ಸಂಸದ ಭರತ್ಕುಮಾರ್್ ರಾವುತ್್ ಹೇಳಿದ್ದಾರೆ.
‘ಸ್ವಾಭಿಮಾನ ಪ್ರದರ್ಶಿಸುವಂತೆ ಶಿವಸೇನಾ ಕಾರ್ಯಕರ್ತರು ತಮ್ಮ ನಾಯಕರಿಗೆ ಕರೆ ನೀಡಿದ್ದಾರೆ. ಸೇನಾ ನಾಯಕತ್ವವು ಈ ಆಶಯವನ್ನು ಅರ್ಥಮಾಡಿಕೊಂಡು ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಮುಂದಾಗುವುದಾಗಿ ಭಾವಿಸುತ್ತೇನೆ’ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.
ರಾವುತ್ ಅವರ ಹೇಳಿಕೆಯನ್ನು ಪಕ್ಷ ತಳ್ಳಿಹಾಕಿದೆ. ‘ರಾವುತ್ ಅವರು ಪಕ್ಷದ ವಕ್ತಾರ ಅಲ್ಲ. ಅಲ್ಲದೇ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ಇಲ್ಲ’ ಎಂದು ಉದ್ಧವ್್ ಠಾಕ್ರೆ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷ ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.