ಚೆನ್ನೈ (ಪಿಟಿಐ): ರಾಜೀವ್ ಹಂತಕರ ಬಿಡುಗಡೆ ತಮಿಳರಿಗೆ ಭಾವನಾತ್ಮಕ ವಿಷಯ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಾಗಾಗಿಯೇ ಕಾಂಗ್ರೆಸ್ ಹೊರತುಪಡಿಸಿ ತಮಿಳುನಾಡಿನ ಎಲ್ಲ ಪಕ್ಷಗಳೂ ಬಿಡುಗಡೆ ನಿರ್ಧಾರವನ್ನು ಸ್ವಾಗತಿಸಿವೆ. ಈ ನಿರ್ಧಾರಕ್ಕಾಗಿ ತಮ್ಮ ಬದ್ಧ ರಾಜಕೀಯ ವೈರಿ ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಶ್ಲಾಘಿಸಿದ್ದಾರೆ.
ರಾಜೀವ್ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಮೊದಲೇ ಆಗ್ರಹಿಸಿತ್ತು. ಆದರೆ ಈ ಬೇಡಿಕೆಯನ್ನೇ ಬುಧವಾರ ಜಯ ಅವರು ಲೇವಡಿ ಮಾಡಿದ್ದಾರೆ.
ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಬೇಕು ಎಂದು 2011ರಲ್ಲಿ ವಿಧಾನಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಡಿಎಂಕೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ ಎಂದು ಜಯಾ ಆರೋಪಿಸಿದರು.
ಚಿದಂಬರಂ ಎಚ್ಚರಿಕೆ ನಡೆ: ತಮಿಳುನಾಡಿನವರೇ ಆದ ಕೇಂದ್ರ ಹಣಕಾಸು ಸಚಿವ ಚಿದಂಬರಂ ‘ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿರುವುದು ಅತೃಪ್ತಿ ಉಂಟು ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರಾಜೀವ್ ಗಾಂಧಿ ಹತ್ಯೆ ಇಂದಿಗೂ ಭರಿಸಲಾಗದ ನೋವಾಗಿಯೇ ಉಳಿದುಕೊಂಡಿದೆ’ ಎಂದು ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
‘ಸುಪ್ರೀಂ’ ತೀರ್ಪಿಗೆ ಬದ್ಧ: ಸಿಬಲ್
ರಾಜೀವ್ ಹಂತಕರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಬದ್ಧ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
‘ರಾಜೀವ್ ಹಂತಕರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂಬುದು ಅಟಾರ್ನಿ ಜನರಲ್ ಅಭಿಪ್ರಾಯವಾಗಿದೆ. ಈಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮಗೆ ಒಪ್ಪಿಗೆ ಇರಲಿ, ಬಿಡಲಿ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.