ADVERTISEMENT

ಬಿಲಾವಲ್‌ಗೆ ಭ್ರಮೆ: ಭಾರತ ವ್ಯಂಗ್ಯ

ಕಾಶ್ಮೀರ ಪಾಕ್ ತೆಕ್ಕೆಗೆ: ಪಿಪಿಪಿ ನಾಯಕನ ವಿವಾದಿತ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:53 IST
Last Updated 20 ಸೆಪ್ಟೆಂಬರ್ 2014, 19:53 IST

ನವದೆಹಲಿ (ಪಿಟಿಐ): ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಅಧಿಕಾರಕ್ಕೆ ಬಂದರೆ ಇಡೀ ಕಾಶ್ಮೀರವನ್ನು ಭಾರತ­ದಿಂದ ವಶಪಡಿಸಿಕೊಳ್ಳಲಾಗು­ವುದು ಎಂದು ಆ ಪಕ್ಷದ ಅಧ್ಯಕ್ಷ ಬಿಲಾವಲ್‌ ಭುಟ್ಟೊ  ಜರ್ದಾರಿ ನೀಡಿದ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

‘ಬಿಲಾವಲ್‌ಗೆ ಭ್ರಮೆ ಇದೆ’ ಎಂದು ಭಾರತ ಶನಿವಾರ ಇಲ್ಲಿ ವ್ಯಾಖ್ಯಾನಿಸಿದೆ. ‘ರಾಷ್ಟ್ರದ ಏಕತೆ ಮತ್ತು ಒಗ್ಗಟ್ಟಿನ ವಿಚಾರದಲ್ಲಿ ಚೌಕಾಸಿಗೆ ಅವಕಾಶವೇ  ಇಲ್ಲ. ಗಡಿ ವಿವಾದವನ್ನು ಶಾಂತಿ­ಯುತ­ವಾಗಿ ಬಗೆಹರಿಸಬೇಕು ಎನ್ನುವ ನಮ್ಮ ನೀತಿಯ ಅರ್ಥ ನಮ್ಮ ಗಡಿಯನ್ನು ಬದ­ಲಾಯಿಸುತ್ತೇವೆ ಎಂದಲ್ಲ’ ಎಂದು ವಿದೇ­ಶಾಂಗ ಸಚಿವಾಲ­ಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ಹೇಳಿದ್ದಾರೆ.

‘ಒಂದಂಗು­ಲವೂ ಬಿಡೆನು’
ಇಸ್ಲಾಮಾಬಾದ್ ವರದಿ:
ಪಾಕ್‌ ಪಂಜಾ­ಬ್‌ನ ಮುಲ್ತಾ­ನ್‌­­ನಲ್ಲಿ ಶುಕ್ರ­ವಾರ ಪಕ್ಷದ ಕಾರ್ಯಕರ್ತರನ್ನು­ದ್ದೇ­ಶಿಸಿ ಮಾತ­ನಾ­ಡಿದ ಬಿಲಾ­ವಲ್‌ ಅವರು, ‘ಪಾಕಿ­ಸ್ತಾ­ನಕ್ಕೆ ಸೇರಿದ  ಕಾಶ್ಮೀರದ ನೆಲ­ವನ್ನು ಒಂದು ಅಂಗು­ಲವೂ ಬಿಡದೆ ನಾನು ವಶ­ಪಡಿಸಿ­ಕೊಳ್ಳುತ್ತೇನೆ’ ಎಂದು ಶುಕ್ರವಾರ ಘೋಷಿಸಿದರು.

ಅವರು ಈ ವಿವಾದಿತ ಹೇಳಿಕೆ ನೀಡು­ವಾಗ ಪಾಕ್‌ನ ಮಾಜಿ ಪ್ರಧಾನಿ­ಗಳಾದ ಯುಸೂಫ್ ರಾಜಾ ಗಿಲಾನಿ ಮತ್ತು ರಾಜಾ ಪರ್ವೇಜ್ ಅಶ್ರಫ್ ಅವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಲಾವಲ್‌ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದರು.

ಬಿಲಾವಲ್‌ ಪಾಕ್‌ನ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನಜೀರ್‌ ಭುಟ್ಟೊ ದಂಪತಿಯ ಮಗ. ಇದುವರೆಗೂ ಪಿಪಿಪಿ ಭಾರತದ ಜೊತೆ ಉತ್ತಮ ಸ್ನೇಹ-ಬಾಂಧವ್ಯ ಹೊಂದಿದ ಪಕ್ಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.