ಪಟ್ನಾ: ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರವು ₹7,636 ಕೋಟಿ ನೀಡಬೇಕು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೇಡಿಕೆಗೆ ಕೇಂದ್ರ ಸರ್ಕಾರ ಕೇವಲ ₹1,200 ಕೋಟಿಯನ್ನು ಮಾತ್ರ ಮಂಜೂರು ಮಾಡಿದೆ. ಇದು ಜೆಡಿಯು ಮುಖಂಡ ನಿತೀಶ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮತ್ತೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಬಹುದು ಎನ್ನಲಾಗಿದೆ.
2017ರ ಆಗಸ್ಟ್ನಲ್ಲಿ ಬಿಹಾರವು ಭಾರಿ ಪ್ರವಾಹಕ್ಕೆ ತುತ್ತಾಗಿತ್ತು. 514 ಮಂದಿ ಜೀವ ಕಳೆದುಕೊಂಡಿದ್ದರು. 19 ಜಿಲ್ಲೆಗಳಲ್ಲಿ ರುದ್ರ ತಾಂಡವವಾಡಿದ್ದ ಪ್ರವಾಹ 1.7 ಕೋಟಿ ಜನರ ಬದುಕನ್ನು ಅತಂತ್ರಗೊಳಿಸಿತ್ತು. ನೆರೆಯ ನೇಪಾಳದಲ್ಲಿ ಸುರಿದ ಮಳೆಯಿಂದಾಗಿ ಈ ದಿಢೀರ್ ಪ್ರವಾಹ ಉಂಟಾಗಿತ್ತು. ರಸ್ತೆಗಳು, ಕೆರೆಕಟ್ಟೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದವು.
ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಾಗುವುದು ಎಂಬ ಭರವಸೆ ಕೊಟ್ಟಿದ್ದರು. ಬಿಹಾರದಲ್ಲಿ ಈಗ ‘ಡಬಲ್ ಎಂಜಿನ್’ನ ಸರ್ಕಾರ ಇದೆ ಎಂದಿದ್ದರು (ಕೇಂದ್ರ ಮತ್ತು ಬಿಹಾರದ ಎನ್ಡಿಎ ಸರ್ಕಾರಗಳನ್ನು ಉಲ್ಲೇಖಿಸಿ ಅವರು ಹಾಗೆ ಹೇಳಿದ್ದರು).
ತಕ್ಷಣದ ಪರಿಹಾರವಾಗಿ ₹500 ಕೋಟಿಯನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಇತ್ತೀಚೆಗೆ, ಪರಿಹಾರ ಮೊತ್ತವನ್ನು ಕೇಂದ್ರ ಮಂಜೂರು ಮಾಡಿದಾಗ ಅದು ₹1,700 ಕೋಟಿಯಷ್ಟೇ ಇತ್ತು. ಅದರಲ್ಲಿ ತಕ್ಷಣದ ಪರಿಹಾರವಾಗಿ ಕೊಟ್ಟಿದ್ದ ₹500 ಕೋಟಿಯನ್ನು ಕಳೆಯಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.