ಪಟ್ಜಾ (ಐಎಎನ್ಎಸ್): ವಿಷಾಹಾರ ಸೇವನೆಯ ಬಳಿಕ 23 ಮಂದಿ ಮಕ್ಕಳ ಸಾವಿಗೆ ಕಾರಣವಾದ ಸರನ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ತಲೆಮರೆಸಿಕೊಂಡಿರುವ ಮುಖ್ಯೋಪಾಧ್ಯಾಯಿನಿ ಮೀನಾ ದೇವಿ ಅವರ ಆಸ್ತಿಪಾಸ್ತಿಯನ್ನು ಬಿಹಾರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು ಎಂದು ಅಧಿಕಾರಿಯೊಬ್ಬರು ಶನಿವಾರ ಇಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ ಮಕ್ಕಳ ಸಾವಿಗೆ ಕಾರಣವಾದ ಅಡುಗೆಯಲ್ಲಿ ಕೀಟನಾಶಕದ ಅಂಶ ಇದ್ದುದು ಖಚಿತಗೊಂಡಿದೆ ಎಂದು ವರದಿಗಳು ಹೇಳಿವೆ.
ಮಂಗಳವಾರ ಸಂಭವಿಸಿದ ಮಧ್ಯಾಹ್ನದ ಬಿಸಿಯೂಟ ದುರಂತದಲ್ಲಿ ಮಕ್ಕಳ ಸಾವು ಸಂಭವಿಸಲು ಮುಖ್ಯೋಪಾಧ್ಯಾಯಿನಿಯೇ ಕಾರಣ ಎಂದು ಸರ್ಕಾರಿ ತನಿಖಾ ವರದಿ ದೂಷಿಸಿದೆ.
'ಆಕೆಯ ಪತ್ತೆ ಇಲ್ಲ. ಆಕೆ ಬರುವಂತೆ ಮಾಡಲು ಆಡಳಿತವು ಆಕೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ ಎಂದು ಸರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಕುಮಾರ್ ಹೇಳಿದರು.
ದುರಂತದ ತನಿಖೆ ನಡೆಸುತ್ತಿರುವ ಜಿಲ್ಲಾ ಅಧಿಕಾರಿಗಳ ಪ್ರಕಾರ ಅಡುಗೆ ಮಾಡುವವರು ಎಣ್ಣೆ ದುರ್ನಾತ ಬೀರುತ್ತಿದೆ ಎಂದು ದೂರಿದರೂ, ಮೀನಾ ದೇವಿ ಅದನ್ನೇ ಬಳಸುವಂತೆ ಒತ್ತಾಯಿಸಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.