ರಾಜಕೋಟ್ (ಗುಜರಾತ್)(ಪಿಟಿಐ): ಮುತಾಲಿಕ್ ಸೇರ್ಪಡೆ–ರದ್ದು ಸೇರಿದಂತೆ ಹಲವು ವಿವಾದಗಳನ್ನು ಎದುರಿಸುತ್ತಿರುವ ಬಿಜೆಪಿಗೆ ಮತ್ತೊಂದು ವಿವಾದದಲ್ಲಿ ಸಿಲುಕುವ ಸಾಧ್ಯತೆಗಳಿವೆ.
ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೋಹನ್ ಕುಂದಾರಿಯಾ ಅವರು ವಿದ್ಯಾರ್ಥಿಗಳ ಬೆನ್ನ ಮೇಲೆ ನಡೆಯುತ್ತಿರುವ ದೃಶ್ಯದ ತುಣುಕೊಂದು ಸುದ್ದಿವಾಹಿನಿಯಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ನಡೆದ ಯೋಗ ಶಿಬಿರವೊಂದರಲ್ಲಿ ಕುಂದರಿಯಾ ಅವರು ಕೆಲ ವಿದ್ಯಾರ್ಥಿಗಳ ಬೆನ್ನ ಮೇಲೆ ನಡೆಯುತ್ತಿರುವ ದೃಶ್ಯ ವೇಗವಾಗಿ ಪಸರಿಸುತ್ತಿದ್ದು, ಚುನಾವಣಾ ಸಮಯದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡುವ ಸಾಧ್ಯತೆಗಳಿವೆ.
ಸ್ವಾಮಿ ನಾರಾಯಣ ದೇವಾಲಯದಲ್ಲಿ ಭಾನುವಾರ ನಡೆದ ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ವಿದ್ಯಾರ್ಥಿಗಳು ನಿರ್ಮಿಸಿದ ಮಾನವ ಸೇತುವೆಯ ಮೇಲೆ ಕುಂದರಿಯಾ ಅತ್ಯಂತ ಜೋಕೆಯಿಂದ ಹೆಜ್ಜೆ ಇಡುತ್ತಿರುವುದು ದೃಶ್ಯದಲ್ಲಿ ಕಾಣಿಸುತ್ತಿದ್ದು, ವಿದ್ಯಾರ್ಥಿಗಳು ಸಂಸ್ಕೃತಿ ಪಾಠಶಾಲಾ ವಿದ್ಯಾಲಯಕ್ಕೆ ಸೇರಿದವರು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕುಂದರಿಯಾ ಅವರಿಗೆ ತಮ್ಮ ಕೌಶಲದ ಪ್ರದರ್ಶನ ತೋರುತ್ತಿದ್ದರು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.