ಜೋಧ್ಪುರ (ಪಿಟಿಐ): ನರ್ಸ್ ಭಂವರಿ ದೇವಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಇಲ್ಲಿನ ಹೈಕೋರ್ಟ್ ಆವರಣದಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಕೈಲಾಶ್ ಜಾಖಡ್ನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಚುರು ಜಿಲ್ಲೆಯ ಸುಜನ್ಗಡ ಸಮೀಪದ ಗ್ರಾಮವೊಂದರಲ್ಲಿ ಮರಳಿನಿಂದ ಆವೃತವಾಗಿದ್ದ ಮನೆಯೊಂದರಲ್ಲಿ ಅವಿತಿಟ್ಟುಕೊಂಡಿದ್ದ ಜಾಖಡ್ನನ್ನು ಪೊಲೀಸರು ಬಂಧಿಸಿದ್ದಾರೆ. `ಆತ ಸದ್ಯ ಜೋಧ್ಪುರ ಪೊಲೀಸರ ವಶದಲ್ಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು~ ಎಂದು ಜೋಧಪುರ ಪೊಲೀಸ್ ಆಯುಕ್ತ ಭೂಪೇಂದರ್ ಕುಮಾರ್ ಡಕ್ ತಿಳಿಸಿದ್ದಾರೆ.
ಆರೋಪಿ ಜಾಖಡ್ ಪತ್ತೆಗಾಗಿ ಜೋಧ್ಪುರ ಪೊಲೀಸರು, ಜೋಧಪುರ, ಬರ್ಮರ್ ಮತ್ತು ಬಿಕನೇರ್ ಜಿಲ್ಲೆಗಳಲ್ಲಿ ವ್ಯಾಪಕ ಬಲೆ ಬೀಸಿದ್ದರು. ಕರ್ನಾಟಕ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೊಲೀಸರ ತಂಡಗಳನ್ನು ಕಳುಹಿಸಲಾಗಿತ್ತು.
ಭಂವರಿದೇವಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಜಾಖಡ್ನ ಸಹಚರರು ಇಲ್ಲಿನ ಹೈಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆಸಿ, ಆತ ತಪ್ಪಿಸಿಕೊಳ್ಳಲು ಸಹಕರಿಸಿದ್ದರು. ಜಾಖಡ್ನ ಜೊತೆಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆತನ ಹದಿನಾಲ್ಕು ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.