ADVERTISEMENT

ಭಟ್ಟಂಗಿತನ: ಮುಲಾಯಂ ಗಡುವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಲಖನೌ (ಪಿಟಿಐ): ಲೋಕಸಭಾ ಚುನಾ­ವಣೆಗಳು ಹತ್ತಿರವಾಗು­ತ್ತಿ­ದ್ದಂ­ತೆಯೇ ಉತ್ತರ ಪ್ರದೇಶದಲ್ಲಿಯ ಸಮಾ­ಜ­­ವಾದಿ ಪಕ್ಷದ ಸರ್ಕಾರದಲ್ಲಿ ಭಟ್ಟಂಗಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ‘ತಪ್ಪು’ ತಿದ್ದಿಕೊ­ಳ್ಳಲು 10 ದಿನಗಳ ಗಡುವನ್ನು ರಾಜ್ಯದ ಸಚಿ­ವ­ರಿಗೆ, ಅಧಿಕಾರಿಗಳಿಗೆ  ನೀಡಿದ್ದಾರೆ.

ಇಲ್ಲಿಯ ಮುಖ್ಯಮಂತ್ರಿಗಳ ನಿವಾ­ಸ­ದಲ್ಲಿ ನಡೆದ ಸಮಾರಂಭ­ವೊಂದ­ರಲ್ಲಿ ಸಚಿವ ಮಹಮ್ಮದ್‌ ಅಜಮ್‌ ಖಾನ್‌ ಅವರನ್ನು ಉದ್ದೇಶಿಸಿ ಮಾತ­ನಾ­ಡಿದ  ಮುಲಾಯಂ, ‘ನಿಮ್ಮ ಸರ್ಕಾ­ರ­ದಲ್ಲಿ ಹೊಗಳು­ಭಟ್ಟರೇ ಆಡ­ಳಿತ ನಡೆಸುತ್ತಿ­ದ್ದಾರೆ. ಇದು ಸರ್ಕಾರ ದುರ್ಬಲ­ಗೊಳ್ಳು­ವಂತೆ ಮಾಡಿದ್ದು ಪಕ್ಷದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. 10 ದಿನ­ದೊ­ಳಗೆ ನೀವೆಲ್ಲ ನಿಮ್ಮ ಕಾರ್ಯವೈಖರಿ ಬದಲಾಯಿಸಿ­ಕೊಳ್ಳ­ಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಅಖಿಲೇಶ್‌ ಅವ­ರನ್ನೂ ತರಾಟೆಗೆ ತೆಗೆದುಕೊಂಡ ಮುಲಾಯಂ, ಭಟ್ಟಂಗಿಗಳ ವಿಷ­ವರ್ತುಲಕ್ಕೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

‘ರಾಜ್ಯ ಸರ್ಕಾರದಲ್ಲಿಯ ಸಚಿವರ ಸಾಧನೆಯ ಪರಾಮರ್ಶೆ ಮಾಡ­ಲಾರೆ, ಆದರೆ ಅವರು ಏನು ಮಾಡು­ತ್ತಿ­ದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸಚಿವರು ಹಾಗೂ ಅಧಿಕಾರಿಗಳೇ ನೀವು ನಿಮ್ಮ ಧೋರಣೆಯನ್ನು ಹತ್ತು ದಿನದೊಳಗೆ ಬದಲಾಯಿಸಿ­ಕೊಳ್ಳ­ಬೇಕು, ಪಕ್ಷ ಸರ್ಕಾರಕ್ಕಿಂತ ದೊಡ್ಡದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.