ಲಖನೌ (ಪಿಟಿಐ): ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿಯ ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಭಟ್ಟಂಗಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ‘ತಪ್ಪು’ ತಿದ್ದಿಕೊಳ್ಳಲು 10 ದಿನಗಳ ಗಡುವನ್ನು ರಾಜ್ಯದ ಸಚಿವರಿಗೆ, ಅಧಿಕಾರಿಗಳಿಗೆ ನೀಡಿದ್ದಾರೆ.
ಇಲ್ಲಿಯ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಮಾರಂಭವೊಂದರಲ್ಲಿ ಸಚಿವ ಮಹಮ್ಮದ್ ಅಜಮ್ ಖಾನ್ ಅವರನ್ನು ಉದ್ದೇಶಿಸಿ ಮಾತನಾಡಿದ ಮುಲಾಯಂ, ‘ನಿಮ್ಮ ಸರ್ಕಾರದಲ್ಲಿ ಹೊಗಳುಭಟ್ಟರೇ ಆಡಳಿತ ನಡೆಸುತ್ತಿದ್ದಾರೆ. ಇದು ಸರ್ಕಾರ ದುರ್ಬಲಗೊಳ್ಳುವಂತೆ ಮಾಡಿದ್ದು ಪಕ್ಷದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. 10 ದಿನದೊಳಗೆ ನೀವೆಲ್ಲ ನಿಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು’ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಅಖಿಲೇಶ್ ಅವರನ್ನೂ ತರಾಟೆಗೆ ತೆಗೆದುಕೊಂಡ ಮುಲಾಯಂ, ಭಟ್ಟಂಗಿಗಳ ವಿಷವರ್ತುಲಕ್ಕೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
‘ರಾಜ್ಯ ಸರ್ಕಾರದಲ್ಲಿಯ ಸಚಿವರ ಸಾಧನೆಯ ಪರಾಮರ್ಶೆ ಮಾಡಲಾರೆ, ಆದರೆ ಅವರು ಏನು ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸಚಿವರು ಹಾಗೂ ಅಧಿಕಾರಿಗಳೇ ನೀವು ನಿಮ್ಮ ಧೋರಣೆಯನ್ನು ಹತ್ತು ದಿನದೊಳಗೆ ಬದಲಾಯಿಸಿಕೊಳ್ಳಬೇಕು, ಪಕ್ಷ ಸರ್ಕಾರಕ್ಕಿಂತ ದೊಡ್ಡದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.