ನವದೆಹಲಿ (ಪಿಟಿಐ): ಭತ್ತದ ಬೆಳಗಾರರಿಗೆ ಸಿಹಿ ಸುದ್ದಿ. ಪ್ರತಿ ಕ್ವಿಂಟಾಲ್ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದ ಪ್ರಸಕ್ತ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 1,410 ರೂಪಾಯಿಗಳಾಗಿದೆ.
‘ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯು 2015–16ನೇ ಸಾಲಿನ ಮುಂಗಾರು ಭತ್ತದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ’ ಎಂದು ಮೂಲಗಳು ಹೇಳಿವೆ.
ಕೃಷಿ ದರ ಆಯೋಗ ಮಾಡಿರುವ ಶಿಫಾರಸಿನ ಬೆನ್ನಲ್ಲೆ ಕೇಂದ್ರ ಸರ್ಕಾರದ ಈ ನಿರ್ಧಾರ ಹೊರ ಬಿದ್ದಿದೆ.
2014–15ನೇ ಸಾಲಿನ ಮುಂಗಾರು ಋತುವಿನ ಬೆಳೆಗೆ ಸರ್ಕಾರವು ಸಾಮಾನ್ಯ ಭತ್ತಕ್ಕೆ 1,360 ರೂಪಾಯಿ ಹಾಗೂ ‘ಎ’ ಕೆಟಗರಿಯ ಧಾನ್ಯಕ್ಕೆ 1,400 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿತ್ತು.
ಏನಿದು ಕನಿಷ್ಠ ಬೆಂಬಲ ಬೆಲೆ: ರೈತರಿಂದ ಕೊಳ್ಳುವ ಆಹಾರ ಧಾನ್ಯಗಳಿಗೆ ಸರ್ಕಾರ ನೀಡುವ ಬೆಲೆಯೇ ಕನಿಷ್ಠ ಬೆಂಬಲ ಬೆಲೆ.
ಈ ಹಂಗಾಮಿನಲ್ಲಿ ಬಿತ್ತನೆ ಎಷ್ಟು: ಭತ್ತವನ್ನು ಎರಡು ಹಂಗಾಮಿನಲ್ಲಿ ಬೆಳೆಯಲಾಗುತ್ತದೆ. ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ಬಿತ್ತನೆಯಾಗಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕಳೆದ ವಾರದ ವರೆಗೂ 4.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತಲಾಗಿದೆ. ಕಳೆದ ವರ್ಷ ಈ ಪ್ರಮಾಣ 4.52 ಲಕ್ಷ ಹೆಕ್ಟೇರ್ಗಳಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.