ಮುಂಬೈ(ಐಎಎನ್ಎಸ್): ಎರಡು ದಿನಗಳ ಹಿಂದೆ ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿನ ವಕೀಲರ ಕೊಠಡಿಗೆ ನುಗ್ಗಿ ಹಿರಿಯ ವಕೀಲ ಮತ್ತು ಅಣ್ಣಾ ತಂಡದ ಸದಸ್ಯ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ಮಾಡಿದ ಯುವಕರನ್ನು ಶಿವಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಅಭಿನಂದಿಸಿದ್ದಾರೆ!
ಪಕ್ಷದ ಮುಖವಾಣಿ ದೊಪಾಹರ್ ಕಾ ಸಾಮ್ನಾದಲ್ಲಿ ಶುಕ್ರವಾರ ಹೇಳಿಕೆಯೊಂದನ್ನು ನೀಡಿರುವ ಠಾಕ್ರೆ ಅವರು, ಪ್ರಶಾಂತ್ ಭೂಷಣ್ ಅವರ ಕಾಶ್ಮಿರ್ ಕುರಿತ ಹೇಳಿಕೆಯನ್ನು ಪ್ರಸ್ತಾಪಿಸಿ, ಭೂಷಣ್ ಮೇಲೆ ಹಲ್ಲೆ ಮಾಡಿದವರನ್ನು ಅಭಿನಂದಿಸುತ್ತಾ, ~ಶಬ್ಬಾಶ್... ದೇಶ ವಿಭಜನೆಯ ಬಗ್ಗೆ ಮಾತನಾಡುವವರಿಗೆ ಇದೇ ಬಗೆಯಲ್ಲಿ ಪಾಠ ಕಲಿಸಬೇಕು~ ಎಂದಿದ್ದಾರೆ.
ಯಾರಾದರೂ ಚುಚ್ಚುತ್ತಿರುವಾಗ ಸುಮ್ಮನೇ ಕೂಡಲಾಗದು. ~ಈ ರೀತಿ ಹೇಳುವವರು ಮೊದಲೇ ತಪ್ಪಿತಸ್ಥರು, ಜನರು ಅಂಥವರಿಗೆ ಪಾಠ ಕಲಿಸುತ್ತಾರೆ~ ಎಂದು ಅವರು ಹೇಳಿದ್ದಾರೆ.
ಕಳೆದ ಬುಧವಾರ ಸುಪ್ರೀಂ ಕೋರ್ಟ್ ನ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಕಚೇರಿಗೆ ನುಗ್ಗಿದ ಮೂವರು ಯುವಕರು, ಪ್ರಶಾಂತ್ ಅವರ ಕಾಶ್ಮಿರ ಕುರಿತಂತೆ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದರು.
ಹಲ್ಲೆ ನಡೆಸಿದವರಲ್ಲಿ ಒಬ್ಬ ತಾನು ಶ್ರೀ ರಾಮಸೇನೆಗೆ ಸೇರಿದವನು ಎಂದು ಹೇಳಿಕೊಂಡಿದ್ದ. ಇನ್ನಿಬ್ಬರು ಭಗತ್ ಸಿಂಗ್ ಸೇನೆಗೆ ಸೇರಿದವರೆಂದು ಪೊಲೀಸರು ತಿಳಿಸಿದ್ದಾರೆ. ಈ ಮೂವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.