ADVERTISEMENT

ಭೂಸ್ಪರ್ಶದ ವೇಳೆ ವಿಮಾನಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಕಠ್ಮಂಡು (ಪಿಟಿಐ): ದೆಹಲಿಯಿಂದ 182 ಪ್ರಯಾಣಿಕರನ್ನು ಹೊತ್ತೊಯ್ಯು­ತ್ತಿದ್ದ ಇಂಡಿಗೊ ವಿಮಾನವು ಕಠ್ಮಂಡು ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣ­ದಲ್ಲಿ ಭೂಸ್ಪರ್ಶ ಮಾಡಿದ ನಂತರ ಬೆಂಕಿ ಕಾಣಿಸಿ­­ಕೊಂಡ ಘಟನೆ ಶನಿವಾರ ವರದಿಯಾಗಿದೆ.

175 ಪ್ರಯಾಣಿಕರು ಹಾಗೂ ಏಳು ವಿಮಾನದ ಸಿಬ್ಬಂದಿ ಇದ್ದ  ‘6ಇ031’ ಹೆಸರಿನ ಇಂಡಿಗೊ ವಿಮಾನವು ಶನಿ­ವಾರ ಮಧ್ಯಾಹ್ನದ ವೇಳೆಗೆ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ  ತಲುಪಬೇಕಾಗಿತ್ತು.

ವಿಮಾನದಲ್ಲಿನ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ವರ್ಗದವರನ್ನು ತುರ್ತು ಬಾಗಿಲುಗಳ ಮೂಲಕ ಹೊರಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿನ ಬ್ರೇಕ್‌ನ ಬಲಭಾಗ­ದಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿ­ಸಿದ  ವಿಮಾನದ ಎಂಜಿನಿಯರ್‌ಗಳು, ತುರ್ತು ಬಾಗಿಲುಗಳ ಮೂಲಕ ಹೊರಗೆ ಇಳಿಯುವಂತೆ ಪ್ರಯಾಣಿಕರಿಗೆ ಸೂಚಿಸಿ­ದರು. ಕೆಲ ಕ್ಷಣಗಳ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿತು ಎಂದು ವಿಮಾನ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ಇಳಿಯುವ ವೇಳೆ ಭಾರಿ  (ಹೆವಿ)ಬ್ರೇಕ್‌ ಹಾಕಿರುವುದೇ ಬೆಂಕಿ ಹೊತ್ತಿ­ಕೊಳ್ಳಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಇಂಡಿಗೊ ವಿಮಾನ ಸಂಸ್ಥೆಯ ಸುರಕ್ಷಿತ ವಿಭಾಗದ ಮುಖ್ಯಸ್ಥರು ಪ್ರಯಾಣಿಕರ ಹಾಗೂ  ಸಿಬ್ಬಂದಿಯ ಸುರಕ್ಷತೆಗೆ ನಮ್ಮ ಸಂಸ್ಥೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಹೇಳಿದ್ದಾರೆ.ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶಕರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.