ADVERTISEMENT

ಭೂಸ್ವಾಧೀನ ವಿಳಂಬ: ಗದಗ ಉಕ್ಜು ಘಟಕಕ್ಕೆ ಪೊಸ್ಕೊ ತಿಲಾಂಜಲಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 9:34 IST
Last Updated 16 ಜುಲೈ 2013, 9:34 IST
ಭೂಸ್ವಾಧೀನ ವಿಳಂಬ: ಗದಗ ಉಕ್ಜು ಘಟಕಕ್ಕೆ ಪೊಸ್ಕೊ ತಿಲಾಂಜಲಿ
ಭೂಸ್ವಾಧೀನ ವಿಳಂಬ: ಗದಗ ಉಕ್ಜು ಘಟಕಕ್ಕೆ ಪೊಸ್ಕೊ ತಿಲಾಂಜಲಿ   

ಭುವನೇಶ್ವರ (ಪಿಟಿಐ): ಕರ್ನಾಟಕದಲ್ಲಿ ಸ್ಫಾಪಿಸಲು ಉದ್ದೇಶಿಸಿದ್ದ 600 ಲಕ್ಷ ಟನ್ ಸಾಮರ್ಥ್ಯದ ಉಕ್ಕು ಘಟಕ ಯೋಜನೆಯನ್ನು ಕೈಬಿಡಲು ತಾನು ನಿರ್ಧರಿಸಿರುವುದಾಗಿ ಪ್ರಮುಖ ಉಕ್ಕು ಕಂಪೆನಿಗಳಲ್ಲಿ ಒಂದಾಗಿರುವ ಪೊಸ್ಕೊ ಮಂಗಳವಾರ ಪ್ರಕಟಿಸಿದೆ. ಭೂ ಸ್ವಾಧೀನದಲ್ಲಿ ಅತಿಯಾದ ವಿಳಂಬ ಮತ್ತು ವ್ಯತಿರಿಕ್ತ ಮಾರುಕಟ್ಟೆ ಪರಿಸ್ಥಿತಿಯನ್ನು ಅನುಸರಿಸಿ ಈ ಕ್ರಮ ಕೈಗೊಂಡಿರುವುದಾಗಿ ಪೊಸ್ಕೊ ಹೇಳಿದೆ.

'ಹಾಲಿ ಮಾರುಕಟ್ಟೆ ಪರಿಸ್ಥಿತಿ ಮತ್ತು ಗದಗದಲ್ಲಿ ಅಗತ್ಯ ಭೂಮಿಯ ಸ್ವಾಧೀನಕ್ಕೆ ಗಮನಾರ್ಹ ವಿಳಂಬ ವಾಗುತ್ತಿರುವುದನ್ನು ಅನುಸರಿಸಿ ನಾವು ಕರ್ನಾಟಕದ ನಮ್ಮ ಉದ್ದೇಶಿತ 6 ಎಂಟಿಪಿಎ (ವಾರ್ಷಿಕ ದಶಲಕ್ಷ ಟನ್) ಸಾಮರ್ಥ್ಯದ  ಉಕ್ಕು ಘಟಕವನ್ನು ರದ್ದು ಪಡಿಸಲು ನಿರ್ಧರಿಸಿದ್ದೇವೆ' ಎಂದು ಪೊಸ್ಕೊ ಇಂಡಿಯಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಯೊಂಗ್ ವೊನ್ ಯೂನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಕರ್ನಾಟಕ ಸರ್ಕಾರದ ಕೈಗಾರಿಕಾ ಇಲಾಖೆ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈ ನಿಟ್ಟಿನಲ್ಲಿ ನೀಡಿದ ಸಹಕಾರ ಮತ್ತು ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ' ಎಂದು ಯೂನ್ ಹೇಳಿದ್ದಾರೆ.

'ಭವಿಷ್ಯದಲ್ಲಿ ರಾಜ್ಯದಿಂದ ಆಕರ್ಷಕ ವಹಿವಾಟು ಪ್ರಸ್ತಾವ ಬಂದಲ್ಲಿ ನಾವು ಅದನ್ನು ಪರಿಶೀಲಿಸಬಹುದು ಮತ್ತು ಕರ್ನಾಟಕಕ್ಕೆ ಹಿಂದಿರುಗಬಹುದು' ಎಂದು ಪೊಸ್ಕೊ ಇಂಡಿಯಾ ಸಿಎಂಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 2010ರ ಜೂನ್ ತಿಂಗಳಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಾರ್ಷಿಕ 600 ಲಕ್ಷ ಟನ್ ಸಾಮರ್ಥ್ಯದ ಉಕ್ಕು ಘಟಕ ಸ್ಥಾಪಿಸುವ ಸಂಬಂಧ ಕರ್ನಾಟಕ ಸರ್ಕಾರದ ಜೊತೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಪೊಸ್ಕೊ ಸಹಿ ಹಾಕಿತ್ತು ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.