ADVERTISEMENT

ಮಕ್ಕಳ ಸಾವಿಗೆ ಪ್ರತೀಕಾರ: ದಹನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2013, 19:59 IST
Last Updated 26 ಫೆಬ್ರುವರಿ 2013, 19:59 IST
ಬಜೆಟ್ ದಿನ ಭಸ್ಮ...ರೈಲು ಡಿಕ್ಕಿ ಹೊಡೆದು ಮಕ್ಕಳಿಬ್ಬರು ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಹಚ್ಚಿದ ಬೆಂಕಿಯಲ್ಲಿ ಸುಟ್ಟು ಕರಕಲಾದ ಗುಲಾಬ್‌ಗಂಜ್ ರೈಲು ನಿಲ್ದಾಣವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು
ಬಜೆಟ್ ದಿನ ಭಸ್ಮ...ರೈಲು ಡಿಕ್ಕಿ ಹೊಡೆದು ಮಕ್ಕಳಿಬ್ಬರು ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಹಚ್ಚಿದ ಬೆಂಕಿಯಲ್ಲಿ ಸುಟ್ಟು ಕರಕಲಾದ ಗುಲಾಬ್‌ಗಂಜ್ ರೈಲು ನಿಲ್ದಾಣವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು   

ವಿದಿಶಾ (ಮಧ್ಯಪ್ರದೇಶ) (ಪಿಟಿಐ): ಇಲ್ಲಿಗೆ ಸಮೀಪದ ಗುಲಾಬ್‌ಗಂಜ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹಳಿ ದಾಟುತ್ತಿದ್ದ ವೇಳೆ ರೈಲು ಹರಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರೈಲು ನೌಕರರೊಬ್ಬರನ್ನು ಸಜೀವವಾಗಿ ದಹಿಸಿದ ಘಟನೆ  ನಡೆದಿದೆ.

ಉದ್ರಿಕ್ತರು ನಡೆಸಿದ ಹಿಂಸಾಚಾರದಲ್ಲಿ ರೈಲ್ವೆ ಇಲಾಖೆಯ ಮತ್ತೊಬ್ಬ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ರೈಲ್ವೆ ಸಚಿವ ಬನ್ಸಲ್ ಅವರು ಹಲವು ಸುರಕ್ಷತಾ ಕ್ರಮಗಳನ್ನು ಒಳಗೊಂಡ ಬಜೆಟ್ ಮಂಡಿಸಿದ ದಿನವೇ ಈ ದುರಂತ ಸಂಭವಿಸಿದೆ.
ನಿಲ್ದಾಣದಲ್ಲಿ ಪಾದಚಾರಿ ಮೇಲುಸೇತುವೆ ಇಲ್ಲದೇ ಇದ್ದುದರಿಂದ ಮಕ್ಕಳಿಬ್ಬರು, ಮುಂದಿನ ಹಳಿ ತಲುಪಲು ಅಲ್ಲೇ ನಿಂತಿದ್ದ ಗೂಡ್ಸ್ ರೈಲಿನಡಿಯಲ್ಲಿ ತೆವಳಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಆಗಮಿಸಿದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ  ಸಿಲುಕಿ ಮೊಹಮ್ಮದ್ ಅಲಿ (5) ಮತ್ತು ಆತನ ಅಕ್ಕ ಎಂಟು ವರ್ಷದ ಇಕ್ರಾ ಮೃತಪಟ್ಟರು.  ಸಂಪರ್ಕ ಕ್ರಾಂತಿ ರೈಲು ವೇಗವಾಗಿ ಬರುತ್ತಿದೆ ಎಂಬ ಬಗ್ಗೆ ನಿಲ್ದಾಣದಲ್ಲಿದ್ದ ಜನರಿಗೆ ಸೂಕ್ತ ಮಾಹಿತಿ ನೀಡದೇ ಇದ್ದುದೇ ಈ ದುರಂತಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.