ಆಗ್ರಾ (ಐಎಎನ್ಎಸ್): `ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಅಂಗೀಕರಿಸದಿದ್ದರೆ ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ~ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಎಚ್ಚರಿಸಿದ್ದಾರೆ.
`ಕೆಲವು ದಿನಗಳ ಹಿಂದೆ ಅಣ್ಣಾ ಅವರನ್ನು ಭೇಟಿಯಾಗಿದ್ದು, ಒಂದು ವೇಳೆ ನೀಡಿದ ಭರವಸೆಯನ್ನು ಈಡೇರಿಸದಿದ್ದರೆ, ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ~ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಅಣ್ಣಾ ಮುನ್ನಡೆಸಿರುವ ಚಳವಳಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. `ಮಸೂದೆಯನ್ನು ಜಾರಿಗೊಳಿಸಲು ಯಾವ ಪಕ್ಷವು ಹಿಂಜರಿಯುತ್ತದೆಯೋ ಆ ಪಕ್ಷದ ವಿರುದ್ಧವೂ ಚಳವಳಿ ನಡೆಯುತ್ತದೆ~ ಎಂದರು.
ಹೊಸ ವಿವಾದಕ್ಕೆ ಸಿಲುಕಿರುವ ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಬಗ್ಗೆಯೂ ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು. ಸತ್ಯಾಂಶಗಳನ್ನು ಮುಚ್ಚಿಡುವ ಯಾವುದೇ ಉದ್ದೇಶ ಅವರಿಗಿರಲಿಲ್ಲ ಎಂದು ಹೇಳಿದ ಕೇಜ್ರಿವಾಲ್, ` ವಿಮಾನ ಪ್ರಯಾಣದಲ್ಲಿ ಉಳಿಸಿದ ಹಣವನ್ನು ಅವರು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.