ADVERTISEMENT

ಮದುವೆ ಉಂಗುರ ಮಾರಿ ಸುಪಾರಿ ನೀಡಿ ಗಂಡನನ್ನು ಹತ್ಯೆ ಮಾಡಿಸಿದ ನವವಿವಾಹಿತೆ!

​ಪ್ರಜಾವಾಣಿ ವಾರ್ತೆ
Published 9 ಮೇ 2018, 7:01 IST
Last Updated 9 ಮೇ 2018, 7:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಂಧ್ರಪ್ರದೇಶ: ನವನವಿವಾಹಿತೆಯೊಬ್ಬಳು ಮದುವೆ ಉಂಗುರ ಮಾರಿ ಸುಪಾರಿ ನೀಡಿ ತನ್ನ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿನ ವಿಳಿಯನಗರಂ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿತ್ತು. ಸುಲಿಗೆ ವೇಳೆ ತನ್ನ ಪತಿಯನ್ನು ಮೂವರು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ನವವಿವಾಹಿತೆ ದೂರು ನೀಡಿದ್ದಳು. ಆದರೆ  ತನಿಖೆ ನಡೆಸಿದಾಗ ಈಕೆಯೇ ಪತಿಯನ್ನು ಹತ್ಯೆ ಮಾಡಿಸಿದ್ದಾಳೆ ಎಂದು ಪೊಲೀಸರು ಪತ್ತೆ ಹಚ್ಚಿದ್ದರು.

ಏನಿದು ಪ್ರಕರಣ?
ತನ್ನ ಪತಿ ಯಮಕ ಗೌರಿಶಂಕರ್‌‍ನ್ನು ಮೂವರು ದುರ್ಷರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವೈ. ಸರಸ್ವತಿ (22) ಸೋಮವಾರ ಪಾರ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇಲ್ಲಿನ ತೋಟಪಲ್ಲಿ ಐಟಿಡಿಎ ಪಾರ್ಕ್‍ನಲ್ಲಿ ರಾತ್ರಿ 8ಗಂಟೆಗೆ ತನ್ನ ಹಾಗೂ ಪತಿಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ತನ್ನಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ತನ್ನ ಪತಿಯನ್ನು ಆ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು,.  ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರ ಪ್ರಕಾರ ಸರಸ್ವತಿ ಆಕೆಯ ಪ್ರಿಯಕರ ಮದ್ದು ಶಿವ ಜತೆ ಸೇರಿ ಈ ಕೃತ್ಯವೆಸಗಿದ್ದಾರೆ. ವಿಜಾಗ್‍ನಲ್ಲಿರುವ ಮದ್ದು ಶಿವ ಬಿ.ಟೆಕ್ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಸರಸ್ವತಿಯ ಪತಿಯನ್ನು ಹತ್ಯೆಗೈಯ್ಯಲು ಮದ್ದು ಶಿವ, ತನ್ನಂತೆಯೇ ಬಿಟೆಕ್ ಪದವೀಧರ, ನಿರೋದ್ಯೋಗಿಗಳಾಗಿರುವ ಮೆರುಗು ಗೋಪಿ ಮತ್ತು ಗುರಲ್ಲಾ ಬಂಗಾರುರಾಜು ಎಂಬವರ ಜತೆ ಸೇರಿ ಈ ಕೃತ್ಯವೆಸಗಿದ್ದಾನೆ.

ADVERTISEMENT

ಸರಸ್ವತಿ ಆನ್‍ಲೈನ್ ಮೂಲಕ ಈ ಯುವಕರಿಗೆ ₹8,000 ವರ್ಗಾವಣೆ ಮಾಡಿದ್ದರು. ಕೊಲೆ ಕೃತ್ಯಕ್ಕಾಗಿ ಶಿವ ಅವರು ₹10,000 ನಗದು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸುಪಾರಿ ಪಡೆದಿದ್ದ ಈ ಯುವಕರು ಕಬ್ಬಿಣದ ರಾಡ್‍ನಲ್ಲಿ ಗೌರಿ ಶಂಕರ್‍‍ನ ತಲೆಗೆ ಹೊಡೆದಿದ್ದಾರೆ. ಆ ಏಟಿಗೆ ಗೌರಿಶಂಕರ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ವರಿಷ್ಠ ರಾಜ ತಿಳಿಸಿದ್ದಾರೆ. ಕೃತ್ಯವೆಸಗಿ ಆಟೋದಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಚೆಕ್‍ ಪೋಸ್ಟ್ ನಲ್ಲಿ ಸೆರೆ ಹಿಡಿಯಲಾಗಿತ್ತು. ಅವರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.