ADVERTISEMENT

ಮಹತ್ವದ ಮಸೂದೆಗಳ ಮಂಡನೆ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
ಮಹತ್ವದ ಮಸೂದೆಗಳ ಮಂಡನೆ
ಮಹತ್ವದ ಮಸೂದೆಗಳ ಮಂಡನೆ   

ನವದೆಹಲಿ (ಪಿಟಿಐ): ಅಕ್ರಮಗಳನ್ನು ಬಯಲಿಗೆಳೆಯುವವರ ರಕ್ಷಣಾ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.ಅಕ್ರಮ ಬಯಲಿಗೆಳೆಯುವ ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯ, ಹಾಗೂ ಹಿಂಬಡ್ತಿಯನ್ನು ತಡೆಯಲು ಈ ಮಸೂದೆಯಲ್ಲಿ ಅವಕಾಶವಿದೆ.

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ, ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿತ್ತು.
ಇದಲ್ಲದೇ ರೋಗಶಾಸ್ತ್ರ ಪ್ರಯೋಗಾಲಯ ನೀತಿ-ನಿಯಮಗಳನ್ನು ರೂಪಿಸಲು ಅವಕಾಶ ನೀಡುವ ಮಸೂದೆ ಹಾಗೂ ರೈತ ಮಹಿಳೆಯರ ಅಗತ್ಯ ಪೂರೈಕೆಗೆ ಸಂಬಂಧಿಸಿದ ಮಸೂದೆಯನ್ನೂ ಈ ಸಂದರ್ಭದಲ್ಲಿ ಮಂಡಿಸಲಾಯಿತು.

 ರ‌್ಯಾಗಿಂಗ್ ತಡೆ ಮಸೂದೆ

ನವದೆಹಲಿ (ಪಿಟಿಐ): ಶಿಕ್ಷಣ ಸಂಸ್ಥೆಗಳಲ್ಲಿ ರ‌್ಯಾಗಿಂಗ್ ತಡೆಯುವ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಎನ್‌ಸಿಪಿಯ ಜನಾರ್ದನ್ ವಾಗ್ಮೊರೆ ಮಂಡಿಸಿದ ಈ ಮಸೂದೆಯು, ರ‌್ಯಾಗಿಂಗ್ ಮಾಡಿದ ವಿದ್ಯಾರ್ಥಿಯನ್ನು ಮೂರು ವರ್ಷಗಳವರೆಗೆ ಶಾಲೆ ಅಥವಾ ಕಾಲೇಜಿನಿಂದ ಡಿಬಾರ್ ಮಾಡಲು ಅವಕಾಶ ಮಾಡಿಕೊಡುತ್ತದೆ.

ADVERTISEMENT



ಅನುಮೋದನೆ: ಶಿಕ್ಷಣಕ್ಕೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳಿಗೆ ಲೋಕಸಭೆಯಲ್ಲಿ ಶುಕ್ರವಾರ ಅನುಮೋದನೆ ನೀಡಲಾಯಿತು.

ತಂತ್ರಜ್ಞಾನ ಸಂಸ್ಥೆಗಳ ತಿದ್ದುಪಡಿ ಮಸೂದೆಯು, ಭುವನೇಶ್ವರ, ಗಾಂಧಿ ನಗರ, ಹೈದರಾಬಾದ್, ಇಂದೋರ್, ಜೋಧ್‌ಪುರ, ಮಂಡಿ, ಪಟ್ನಾ ಹಾಗೂ ರೋಪರ್‌ನಲ್ಲಿ ಹೊಸದಾಗಿ ಐಐಟಿ ಸ್ಥಾಪಿಸಲು ಅವಕಾಶ ನೀಡುತ್ತದೆ.
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ತಿದ್ದುಪಡಿ ಮಸೂದೆಗೂ ಅನುಮೋದನೆ ನೀಡಲಾಗಿದೆ.

ಹೆಚ್ಚಿದ ಪ್ರಮಾಣ: ಐಐಎಂ, ಐಐಟಿಗಳಲ್ಲಿ ಹೊಸದಾಗಿ ಪ್ರವೇಶ ಪಡೆದ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವು ಪ್ರಸಕ್ತ ಸಾಲಿನಲ್ಲಿ ಹೆಚ್ಚಳ ಕಂಡಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಈ ಪ್ರಮಾಣವು ಐಐಎಂಗಳಲ್ಲಿ ಶೇ 23.05 ಹಾಗೂ ಐಐಟಿಗಳಲ್ಲಿ ಶೇ 23.61ರಷ್ಟು ಹೆಚ್ಚಾಗಿದೆ. 2009-10 ನೇ ಸಾಲಿನಲ್ಲಿ ಈ ಪ್ರಮಾಣವು ಕ್ರಮವಾಗಿ ಶೇ 14.52 ಹಾಗೂ ಶೇ 20.38ರಷ್ಟು ಇತ್ತು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಶೂನ್ಯವೇಳೆಯಲ್ಲಿ ತಿಳಿಸಿದರು.

ಕಲಿಕೆಯಲ್ಲಿ ಸುಧಾರಣೆ: ದೇಶದಾದ್ಯಂತ ಒಟ್ಟಾರೆ ಕಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿಯ (ಎನ್‌ಸಿಇಆರ್‌ಟಿ) ರಾಷ್ಟ್ರೀಯ ಮಂಡಳಿ ಸಮೀಕ್ಷೆಯಿಂದ ತಿಳಿದು ಬಂದಿರುವುದಾಗಿ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.