ADVERTISEMENT

ಮಾನವಶಕ್ತಿ: ಭಾರತ-ಯುಎಇ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಮಾನವಶಕ್ತಿಗೆ ಸಂಬಂಧಿಸಿದಂತೆ ಒಪ್ಪಂದವೊಂದಕ್ಕೆ ಭಾರತ ಮತ್ತು ಯುಎಇ ಮಂಗಳವಾರ ಇಲ್ಲಿ ಸಹಿ ಹಾಕಿವೆ.

 ಯುಎಇನಲ್ಲಿ ನೆಲೆಸಿರುವ ಭಾರತೀಯ ಕಾರ್ಮಿಕರ ಹಿತಾಸಕ್ತಿಯ ರಕ್ಷಣೆ ಮತ್ತು ಈಗಿರುವ ಮಾನವ ಸಂಪನ್ಮೂಲವನ್ನು ಇನ್ನಷ್ಟು ಸುಧಾರಿಸುವುದು ಒಪ್ಪಂದದಲ್ಲಿ ಇರುವ ಪ್ರಮುಖ ಅಂಶಗಳು.
  ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮತ್ತು ಯುಎಇ ಕಾರ್ಮಿಕ ಸಚಿವ ಸಕ್ರ ಗೋಬಾಷ್ ಸಯೀದ್ ಗೋಬಾಷ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

 ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಆನ್‌ಲೈನ್ ಮೂಲಕ ನಡೆಸುವುದಕ್ಕೂ ಒಪ್ಪಂದದಲ್ಲಿ ಒತ್ತು ನೀಡಲಾಗಿದೆ. ಸುಮಾರು 1.7 ದಶಲಕ್ಷ ಭಾರತೀಯರು ಯುಎಇನಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಯುಎಇ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಾರ್ಮಿಕರ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು, ದೂರಿನ ಸಂಖ್ಯೆಯು ಕಡಿಮೆಯಾಗಿದೆ ಎಂದು ವಯಲಾರ್ ರವಿ ನುಡಿದರು.

ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಯುಎಇ ಕಾರ್ಮಿಕ ಸಚಿವರು ಹೈದರಾಬಾದ್‌ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ, ತಿರುವನಂತಪುರದಲ್ಲಿ  ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಸರ್ಕಾರದ ಅನೇಕ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.