ADVERTISEMENT

ಮಾವೊವಾದಿಗಳಲ್ಲಿ ಮನಸ್ತಾಪ ತಂದಿತ್ತ ಶಾಸಕನ ಅಪಹರಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 9:35 IST
Last Updated 22 ಏಪ್ರಿಲ್ 2012, 9:35 IST

ಭುವನೇಶ್ವರ (ಪಿಟಿಐ): ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿ ಬಿಡುಗಡೆಗಾಗಿ ಒಡಿಶಾ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಟ್ಟಿರುವ ಮಾವೊವಾದಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿರುವುದಾಗಿ ಭಾನುವಾರ ತಿಳಿದುಬಂದಿದೆ.

ಜೈಲಿನಲ್ಲಿರುವ ಚಾಸಿ ಮುಳಿಯಾ ಆದಿವಾಸಿ ಸಂಘದ (ಸಿಎಮ್‌ಎಎಸ್) ಸದಸ್ಯರ ಬಿಡುಗಡೆಗೆ ಪ್ರತಿಯಾಗಿ ಹಿಕಾಕ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾವೊವಾದಿಗಳಲ್ಲಿ ಇದೀಗ ಹಲವರು ಹಿಕಾಕ ಅವರ ಭವಿಷ್ಯ `ಪ್ರಜಾ ನ್ಯಾಯಾಲಯ~ದಲ್ಲಿ ತೀರ್ಮಾನವಾಗಲಿ ಎಂಬ ನಿಲುವಿಗೆ ಅಂಟಿಕೊಂಡಿರುವ ಪರಿಣಾಮ ಮಾವೊಗಳಲ್ಲಿಯೇ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ.

`ಒಡಿಶಾ ಸರ್ಕಾರಕ್ಕೆ ಅಪಹೃತ ಶಾಸಕನನ್ನು ಬಿಡುಗಡೆ ಮಾಡಿಸಬೇಕೆಂಬ ಕಾಳಜಿ ಇದ್ದರೆ ತಕ್ಷಣವೇ ನಮ್ಮ ಬೇಡಿಕೆಯಂತೆ ಜೈಲಿನಲ್ಲಿ ಸಿಎಮ್‌ಎಎಸ್‌ನ ಎಲ್ಲ ಸದಸ್ಯರನ್ನು ಬಿಡುಗಡೆಗೊಳಿಸಬೇಕು~ ಎಂದು  ಶ್ರೀಕಾಕುಳಂ - ಕೊರಾಪಟ್‌ನ ಸಿಪಿಐ (ಮಾವೊವಾದಿ) ಸಮಿತಿಯ ನಾಯಕ ದಯಾ ಅವರು ಮಾಧ್ಯಮಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಶಾಸಕನ ಬಿಡುಗಡೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿರೋಧಿಸುತ್ತಿರುವ ಮಾವೊಗಳು ಅಪಹೃತ ಶಾಸಕನ ಬಿಡುಗಡೆ ವಿಳಂಬವಾದರೆ ಅದಕ್ಕೆ ಸರ್ಕಾರವೇ `ಹೊಣೆ~ ಎಂದು ಹೇಳಿದ್ದಾರೆ.

ಮಾವೊಗಳ ಆಂಧ್ರ ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ (ಎಓಬಿಎಸ್‌ಜೆಡ್‌ಸಿ) ವಕ್ತಾರ ಜಗಬಂಧು ಇತ್ತೀಚೆಗೆ `ಹಿಕಾಕ ಅವರ ಭವಿಷ್ಯ ಏಪ್ರಿಲ್ 25ರಂದು ಪ್ರಜಾ ನ್ಯಾಯಾಲಯದಲ್ಲಿ ನಿರ್ಧಾವಾಗಲಿದೆ~ ಎಂದು ಧ್ವನಿ ಸಂದೇಶ ಕಳುಹಿಸಿದ ಬೆನ್ನಲ್ಲೇ ದಯಾ ಅವರು ಪತ್ರ ಬರೆದಿರುವ ಕುರಿತಂತೆ ಮಾವೊಗಳಲ್ಲಿಯೇ ವೈಮನಸ್ಯ ಮೂಡಿದೆ.

`ದಯಾ ಅವರು ಬರುದಿರುವ ಪತ್ರವು ಗೊಂದಲದಿಂದ ಕೂಡಿದ್ದು, ಅದು  ಜಗಬಂಧು ಹೇಳಿಕೆಗಿಂತ ಭಿನ್ನವಾಗಿದೆ. ದಯಾ ಬೇಡಿಕೆಯಂತೆ ಜೈಲಿನಲ್ಲಿರುವ ಎಲ್ಲ ಸಿಎಮ್‌ಎಎಸ್‌ನ ಸದಸ್ಯರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ~ ಎಂದು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.