ADVERTISEMENT

ಮೀನುಗಾರನ ಸಾವು: ಮಾಹಿತಿ ನೀಡದ ಪಾಕಿಸ್ತಾನ

ಪಿಟಿಐ
Published 11 ಜೂನ್ 2018, 19:55 IST
Last Updated 11 ಜೂನ್ 2018, 19:55 IST

ವಡೋದರ, (ಗುಜರಾತ್): ‌ಭಾರತೀಯ ಮೀನುಗಾರರೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಮೂರು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಈ ಬಗ್ಗೆ ಅವರ ಕುಟುಂಬದ ಸದಸ್ಯರಿಗೆ ಇತ್ತೀಚೆಗಷ್ಟೇ ಮಾಹಿತಿ ದೊರೆತಿದೆ.

ಗುಜರಾತ್‌ ರಾಜ್ಯದ ಸೋಮನಾಥ್ ಜಿಲ್ಲೆಯ ಕೋಟಾಡಾ ಗ್ರಾಮದ ದೇವರಾಮ ಬರಯ್ಯ (55) ಅವರನ್ನು ಪಾಕಿಸ್ತಾನದ ಕಡಲ ಗಸ್ತು ಸಂಸ್ಥೆಯ ಅಧಿಕಾರಿಗಳು ಫೆ.2ರಂದು ಬಂಧಿಸಿ ಕರಾಚಿ ಜೈಲಿನಲ್ಲಿ ಇರಿಸಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.‌

ಆದರೆ, ಮಾರ್ಚ್‌ 4ರಂದು ಬರಯ್ಯ ಮೃತಪಟ್ಟಿದ್ದರು. ಜೈಲಿನಲ್ಲಿ ಜೊತೆಗಿದ್ದ ಅವರ ಸಹೋದರನ ಅಳಿಯ ಪ್ರವೀಣ್ ಧನ್‌ಸುಖ್ ಚಾವ್ಡಾ ಈ ಕುರಿತು ಏಪ್ರಿಲ್‌ 22ರಂದು ಕುಟುಂಬದ ಸದಸ್ಯರಿಗೆ ಪತ್ರ ಬರೆದಿದ್ದರು. ಆದರೆ ಬರಯ್ಯ ಅವರ ಪತ್ನಿ ಕಸ್ತೂರಿಬೆನ್‌ ಅವರಿಗೆ ಇತ್ತೀಚೆಗಷ್ಟೇ ಈ ಪತ್ರ ದೊರೆತಿದೆ.

ADVERTISEMENT

ಮೀನುಗಾರನ ಸಾವಿನ ಬಗ್ಗೆ ಭಾರತದ ಅಧಿಕಾರಿಗಳಿಗೆ ಮಾಹಿತಿ ನೀಡದ ಪಾಕಿಸ್ತಾನದ ಕ್ರಮವನ್ನು ಗುಜರಾತ್ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವೆಲ್ಜಿಬಾಯಿ ಮಸಾನಿ ಖಂಡಿಸಿದ್ದಾರೆ. ಈ ವಿಷಯವನ್ನು ಅಲ್ಲಿನ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ಮನವಿ ಮಾಡಿದ್ದಾರೆ.

ಕಸ್ತೂರಿಬೆನ್‌ ಕೂಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಆರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.