ADVERTISEMENT

ಮೀನುಗಾರರ ಹತ್ಯೆ ಪ್ರಕರಣ: ಭಾರತದ ಕಾನೂನಿನಂತೆಯೇ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:20 IST
Last Updated 22 ಫೆಬ್ರುವರಿ 2012, 8:20 IST

ನವದೆಹಲಿ, (ಐಎಎನ್ಎಸ್): ಇಟಲಿಯ ನೌಕೆಯ ಭದ್ರತಾ ಸಿಬ್ಬಂದಿಯಿಂದ  ಹತ್ಯೆಗೀಡಾದ ಭಾರತದ ಇಬ್ಬರು ಮೀನುಗಾರರ ಕೊಲೆ ಪ್ರಕರಣದ ವಿಚಾರಣೆಯನ್ನು ನಮ್ಮ ನಾಡಿನ ಕಾನೂನಿನಂತೆಯೇ ನಡೆಸಲಾಗುವುದು ಎಂದು ವಿದೇಶಾಂಗ ವ್ವವಹಾರ ಖಾತೆ ಸಚಿವೆ ಪ್ರಣೀತ್ ಕೌರ್ ಅವರು ಗುರುವಾರ ತಿಳಿಸಿದ್ದಾರೆ.

ಇಟಲಿಯ ವಿದೇಶ ಖಾತೆಯ ಉಪ ಸಚಿವ ಸ್ಟಫನ್ ಡಿ ಮಿಸ್ಟುರಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ~ಖಂಡಿತವಾಗಿಯೂ ಮೀನುಗಾರರ ಹತ್ಯೆ ಪ್ರಕರಣವನ್ನು ಭಾರತದ ಕಾನೂನಿನಂತೆಯೇ ನಡೆಸಲಾಗುವುದು~ ಎಂದು ಸ್ಪಷ್ಟಪಡಿಸಿದರು.

ದುಃಖ ತಂದಿದೆ: ಎರಡೂ ದೇಶಗಳ ನಡವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದ, ಕೇರಳದ ಸಮುದ್ರದಲ್ಲಿ ಫೆ 15 ರಂದು ನಡೆದ ಇಬ್ಬರು ಮೀನುಗಾರರ ಹತ್ಯೆಯ ಬಗ್ಗೆ , ಇಟಲಿಯ ವಿದೇಶ ಖಾತೆ ಉಪ ಸಚಿವರು ~ ಪ್ರಕರಣದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಪ್ರಕರಣ ತಮಗೆ ದುಃಖ ತಂದಿದೆ~ ಎಂದು ತಿಳಿಸಿದ್ದಾರೆ ಎಂದೂ ಸಚಿವರು ಹೇಳಿದರು.

ADVERTISEMENT

ಇಟಲಿಯು ಈ ಘಟನೆ ಅಂತರ್ರಾಷ್ಟ್ರೀಯ ಸಮುದ್ರದ ನೀರಿನಲ್ಲಿ ನಡೆದಿದೆ. ಹೀಗಾಗಿ ಪ್ರಕರಣದ ವಿಚಾರಣೆ ಭಾರತದ ಕಾನೂನಿನಂತೆ ನಡೆಸಲಾಗದು ಎಂದು ವಾದಿಸುತ್ತಿದೆ. ಆದರೆ ಅದರ ಈ ನಿಲುವನ್ನು ಭಾರತ ಪ್ರಶ್ನಿಸುತ್ತಿದೆ. ಏಕೆಂದರೆ ಘಟನೆ ನಡೆದಿದ್ದು ಕೇರಳದ ತೀರದಲ್ಲಿ ಎಂದು ಸಚಿವರು ತಿಳಿಸಿದ್ದಾರೆ.

ಎಫ್ ಐ ಆರ್ ರದ್ದತಿಗೆ ಕೋರಿಕೆ: ಕೇರಳದ ಇಬ್ಬರು ಮೀನುಗಾರರ ಹತ್ಯೆ ಸಂಬಂದಿಸಿದಂತೆ ಕೇರಳದ ಪೊಲೀಸರು ಇಟಲಿಯ ನೌಕೆಗೆ ಸೇರಿದ್ದ ಇಬ್ಬರನ್ನು ಬಂಧಿಸಿ ಅವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ ಇಟಲಿಯು, ಮೀನುಗಾರರ ಹತ್ಯೆಯ ಆಪಾದನೆ ಹೊತ್ತಿರುವ ತನ್ನ ಇಬ್ಬರು ನಾಗರಿಕರ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯನ್ನು ರದ್ದು ಪಡಿಸುವಂತೆ ಕೋರಿ ಕೇರಳದ ಹೈಕೋರ್ಟ್ ಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.