ADVERTISEMENT

ಮುಂದುವರೆದ ಕೂಡಂಕುಳಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 7:30 IST
Last Updated 8 ಅಕ್ಟೋಬರ್ 2012, 7:30 IST
ಮುಂದುವರೆದ ಕೂಡಂಕುಳಂ ಪ್ರತಿಭಟನೆ
ಮುಂದುವರೆದ ಕೂಡಂಕುಳಂ ಪ್ರತಿಭಟನೆ   

ಚೆನ್ನೈ (ಐಎಎನ್‌ಎಸ್): ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ (ಕೆಎನ್‌ಪಿಪಿ) ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಜಲ ಪ್ರತಿಭಟನೆಯು ಸೋಮವಾರವೂ ಮುಂದುವರೆದಿದ್ದು, ಪ್ರತಿಭಟನೆಯಲ್ಲಿ ಎಂದಿನಂತೆ ಮೀನುಗಾರರು, ವ್ಯಾಪಾರಿಗಳು ಸಾಮಾಜಿಕ ಕಾರ್ಯಕರ್ತರು, ಸ್ಥಳೀಯ ರಾಜಕಾರಿಣಿಗಳು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಸ್ಥಾವರದ 500 ಮೀಟರ್ ಸುತ್ತ ತೀವ್ರವಾದ ಪ್ರತಿಭಟನೆಯನ್ನು ಆರಂಭಿಸಿದರು.

`ಕನ್ಯಾಕುಮಾರಿ, ತಿರುವಣ್ಣಮಲ್ಯೆ ಮತ್ತು ಟುಟಿಕೂರೈನ್ ಸೇರಿದಂತೆ ಕಡಲ ತೀರದ ಹಲವು ಪಟ್ಟಣಗಳಿಂದ ಸುಮಾರು ಸಾವಿರಕ್ಕೂ ಅಧಿಕ ಮೀನುಗಾರರು ತಮ್ಮ ದೋಣಿಗಳೊಂದಿಗೆ ಆಗಮಿಸಿದ ಸ್ಥಾವರದ ವಿರುದ್ಧ ಘೋಷಣೆಯನ್ನು ಕೂಗುತ್ತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ~ ಎಂದು ಪರಮಾಣು ವಿದ್ಯುತ್ ಯೋಜನೆ ವಿರೋಧಿ ಸಂಘಟನೆ ನಾಯಕ ಎಂ. ಪುಷ್‌ಪ್ರಯಾನ್ ಅವರು ತಿಳಿಸಿದ್ದಾರೆ.

`ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ ಸರ್ಕಾರವು ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುತ್ತಿಲ್ಲ. `ಸಮುದ್ರ ಮುತ್ತಿಗೆ~ ಪ್ರತಿಭಟನೆಯನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ಸಂಜೆಯ ವೇಳೆಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ~ ಎಂದರು.

`ಇದು ಸಮುದ್ರ ಪ್ರತಿಭಟನೆಯಾಗಿದ್ದು, ಯಾವುದೇ ಕಾರಣಕ್ಕೂ ಹಿಂಸೆಯ ರೂಪವನ್ನು ಪಡೆಯವುದಿಲ್ಲ. ಇದರಿಂದಾಗಿ ಪ್ರತಿಭಟನೆಗಾಗಿ ಹೆಚ್ಚು ಪೋಲಿಸರ ಉಪಸ್ಥಿತಿ ಅವಶ್ಯವಿರುವುದಿಲ್ಲ~ ಎಂದು ಅವರು ತಿಳಿಸಿದರು. 
ಆದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಸುಮಾರು 3ಸಾವಿರಕ್ಕೂ ಅಧಿಕ ಪೋಲಿಸರನ್ನು ಕೂಡಂಕುಳಂ ಸ್ಥಾವರದ ಸುತ್ತಮುತ್ತ ನಿಯೋಜಿಸಲಾಗಿದೆ.

ಪ್ರತಿಭಟನಾಕಾರರು ಅಣು ಸ್ಥಾವರದ ವಿರುದ್ಧ ಸಮುದ್ರ ಜಲಪ್ರತಿಭಟನೆಯನ್ನು ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಪ್ರತಿಭಟನೆಯು ಸಮುದ್ರ ಜಲ ಪ್ರತಿಭಟನೆಯಿಂದ ದಡದ ಉಸುಕಿಗೂ ವಿಸ್ತರಣೆಗೊಂಡಿತ್ತು. ಈ ಸಮಯದಲ್ಲಿ ನೂರಾರು ಜನರು ಉಸುಕಿನಲ್ಲಿ ಹಳ್ಳ ತೋಡಿ ಕುತ್ತಿಗೆ ವರೆಗೂ ಮರಳನ್ನು ಮುಚ್ಚಿಕೊಂಡು ಸ್ಥಾವರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದ್ದರು.


ಇದೀಗ ಮತ್ತೊಮ್ಮೆ`ಸಮುದ್ರ ಮುತ್ತಿಗೆ~ಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT