ಚೆನ್ನೈ (ಪಿಟಿಐ): ತೈಲ ಮಾರಾಟ ಕಂಪೆನಿಗಳ ಪ್ರತಿನಿಧಿಗಳು, ಮುಷ್ಕರ ನಿರತ ಎಲ್ಪಿಜಿ ಟ್ಯಾಂಕರ್ ಹಾಗೂ ಲಾರಿ ಮಾಲೀಕರ ಜತೆ ಸರ್ಕಾರ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾಗಿದ್ದು, ಲಾರಿ ಮಾಲೀಕರು ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಗುರುವಾರ ಕೈಬಿಟ್ಟಿದ್ದಾರೆ.
ತೈಲ ಕಂಪೆನಿಯ ಪ್ರತಿನಿಧಿಗಳು ಮತ್ತು ಲಾರಿ ಮಾಲೀಕರ ಜತೆ ಸರ್ಕಾರ ಸತತ 10 ಗಂಟೆಗಳ ಕಾಲ ನಡೆಸಿದ ಮಾತುಕತೆ ನಂತರ ಈ ನಿರ್ಧಾರ ಹೊರಬಿದ್ದಿದೆ. ಇದರಿಂದ, ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ದಕ್ಷಿಣದ ರಾಜ್ಯಗಳ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬಾಡಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಮಾರು 500ಕ್ಕೂ ಹೆಚ್ಚು ಎಲ್ಪಿಜಿ ಟ್ಯಾಂಕರ್, ಲಾರಿ ಮಾಲೀಕರು ಫೆ. 29ರಿಂದ ಏಕಾಏಕಿ ಮುಷ್ಕರ ಆರಂಭಿಸಿದ ಕಾರಣ, ಸಿಲಿಂಡರ್ ಪೂರೈಕೆ ಏರುಪೇರಾಗಿತ್ತು.
ಟ್ಯಾಂಕರ್ಗಳ ಸಂಚಾರ ಆರಂಭ |
ಸುರತ್ಕಲ್: ದಕ್ಷಿಣ ಭಾರತ ಎಲ್ಪಿಜಿ ಟ್ಯಾಂಕರ್ ಮಾಲೀಕರು ಮುಷ್ಕರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಇಲ್ಲಿ ಠಿಕಾಣಿ ಹೂಡಿದ್ದ ಟ್ಯಾಂಕರ್ಗಳು ಗುರುವಾರ ಬೆಳಿಗ್ಗೆ ಸಂಚಾರ ಆರಂಭಿಸಿವೆ. ಬಾಳದಲ್ಲಿರುವ ಎಂಆರ್ಪಿಎಲ್-ಒಎನ್ಜಿಸಿ, ಎಚ್ಪಿಸಿಎಲ್ ಘಟಕಗಳಿಂದ ರಾಜ್ಯ, ದೇಶದ ವಿವಿಧೆಡೆಗೆ ಅನಿಲ ತುಂಬಿಸಿಕೊಂಡು ಹೊರಟವು. |
30 ದಿನಗಳ ಒಳಗೆ ತೈಲ ಕಂಪೆನಿ ಮತ್ತು ಲಾರಿ ಮಾಲೀಕರು ಪರಸ್ಪರ ನಿರ್ಣಯಕ್ಕೆ ಬರುವಂತೆ ಸೂಚಿಸಲಾಗಿದೆ.
ಲಾರಿ ಮತ್ತು ಟ್ಯಾಂಕರ್ಗಳು ಗುರುವಾರದಿಂದಲೇ ರಸ್ತೆಗೆ ಇಳಿದಿವೆ. ತೈಲ ಕಂಪೆನಿಗಳ ಜತೆ ಇನ್ನೊಂದು ಸುತ್ತಿನ ಮಾತುಕತೆಯ ನಂತರ ದರ ನಿಗದಿಪಡಿಸಲಾಗುವುದು ಎಂದು ಲಾರಿ ಮತ್ತು ಟ್ಯಾಂಕರ್ ಮಾಲೀಕರ ಸಂಘ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.