ನವದೆಹಲಿ: ಎನ್ಡಿಎ ತೊರೆಯುವುದಕ್ಕೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರಿಗೆ ಇಷ್ಟವಿರಲಿಲ್ಲ. ಕಡೆಗೆ ಪಕ್ಷದ ನಿರ್ಧಾರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ಎನ್ನಲಾಗಿದೆ.
ಬಿಜೆಪಿ ಜೊತೆಗಿನ ಮೈತ್ರಿಯನ್ನು ಶತಾಯ ಗತಾಯ ಮುಂದುವರಿಸಲು ಶರದ್ ಬಯಸಿದ್ದರು. ಇದಕ್ಕಾಗಿ ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ಕೈಗೊಳ್ಳುವುದನ್ನು ಅವರು ಮುಂದೂಡುತ್ತಿದ್ದರು. ಜೊತೆಗೆ ಮೈತ್ರಿ ಉಳಿಸಿಕೊಳ್ಳುವ ಸಲುವಾಗಿ ಮಾರ್ಗೋಪಾಯ ಹುಡುಕಲೂ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಬಿಜೆಪಿ ಪ್ರಮುಖ ಮುಖಂಡರೊಂದಿಗೆ ಉತ್ತಮ ಗೆಳೆತನ ಹೊಂದಿರುವ ಶರದ್, ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂಬ ಭರವಸೆಯನ್ನು ನಿರೀಕ್ಷಿಸಿದ್ದರು. ಆದರೆ, ಬಿಜೆಪಿ ಮುಖಂಡರು ಇಂತಹ ಭರವಸೆ ನೀಡದ ಕಾರಣ ಶರದ್ ಅವರ ಪ್ರಯತ್ನ ವಿಫಲವಾಯಿತು ಎನ್ನಲಾಗಿದೆ.
ಕಾಂಗ್ರೆಸ್ಗೆ ಅನುಕೂಲ- ಶಿವಸೇನೆ: ಮುಂಬೈ ವರದಿ: ಜೆಡಿಯು ತೆಗೆದುಕೊಂಡಿರುವ ಈ ನಿಲುವಿನಿಂದ ಕಾಂಗ್ರೆಸ್ಗೆ ಅನುಕೂಲವಾಗಲಿದೆ ಎಂದು ಎನ್ಡಿಎ ಮೈತ್ರಿಕೂಟದ ಅಂಗಪಕ್ಷ ಶಿವಸೇನೆ ಹೇಳಿದೆ.
`ಹೊಂದಾಣಿಕೆಯಾಗದ ಜೋಡಿ, ಪ್ರೇಮ ವಿವಾಹಕ್ಕೆ ವಿಚ್ಛೇದನ'
ಪಟ್ನಾ ವರದಿ: `ಹೊಂದಾಣಿಕೆಯಾಗದ ಜೋಡಿಯ ಪ್ರೇಮ ವಿವಾಹವು ವಿಚ್ಛೇದನದಲ್ಲಿ ಅಂತ್ಯವಾಗಿದೆ' ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ವ್ಯಂಗ್ಯವಾಡಿದ್ದಾರೆ.`ನನ್ನನ್ನು ಅಧಿಕಾರದಿಂದ ದೂರ ಇರಿಸಬೇಕು ಎಂಬ ಕಾರಣದಿಂದಲೇ ಆ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು' ಎಂದು ಅವರು ಜೆಡಿಯು- ಬಿಜೆಪಿ ಮೈತ್ರಿ ಮುರಿದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
`ನರೇಂದ್ರ ಮೋದಿ ಪರ ಇರುವ ಆರ್ಎಸ್ಎಸ್, ಎಲ್.ಕೆ. ಅಡ್ವಾಣಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿತು. ಇದರಿಂದ ಏಕಾಂಗಿಯಾದ ಆ ಹಿರಿಯ ನಾಯಕ ಜೆಡಿಯುವನ್ನು ಎತ್ತಿಕಟ್ಟಿ ಎನ್ಡಿಎ ಮೈತ್ರಿಕೂಟಕ್ಕೆ ಬೆದರಿಕೆ ಹಾಕಿಸಿದ್ದಾರೆ. ಇದಕ್ಕಾಗಿ ನಿತೀಶ್ `ಸತಿ'ಯಾಗಿದ್ದಾರೆ' ಎಂದು ಲಾಲು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಿಲುವು: ಜೆಡಿಯು- ಬಿಜೆಪಿ ಮೈತ್ರಿ ಮುರಿದುಬಿದ್ದಿರುವುದರಿಂದ ಉಂಟಾಗಿರುವ ಸನ್ನಿವೇಶದ ಬಗ್ಗೆ ಕಾದು ನೋಡುವ ತಂತ್ರವನ್ನು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ ಅನುಸರಿಸಿದ್ದರೂ ವಿಧಾನಸಭೆಯಲ್ಲಿನ ನಾಲ್ವರು ಕಾಂಗ್ರೆಸ್ ಶಾಸಕರು ನಿತೀಶ್ ಕುಮಾರ್ ಅವರ ಸರ್ಕಾರಕ್ಕೆ ಬೆಂಬಲ ನೀಡಲು ಉತ್ಸುಕರಾಗಿದ್ದಾರೆ.`ಕೋಮುವಾದಿ ಬಿಜೆಪಿ ಸಖ್ಯ ತೊರೆದಿರುವ ಕಾರಣ ನಾವು ಸರ್ಕಾರಕ್ಕೆ ಬೆಂಬಲು ನೀಡಬಹುದು' ಎಂದು ಕಾಂಗ್ರೆಸ್ ಶಾಸಕ ತೌಸಿಫ್ ಆಲಂ ಹೇಳಿದ್ದಾರೆ.
`ತೃತೀಯ ರಂಗ ರಚನೆಗೆ ಬಲ': `ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟು ಪರ್ಯಾಯ ಮೈತ್ರಿಯ ಬಗ್ಗೆ ಚಿಂತಿಸುವವರಿಗೆ ಜೆಡಿಯು ಕೈಗೊಂಡಿರುವ ನಿರ್ಧಾರ ಒಳ್ಳೆಯ ಸುದ್ದಿ. ತೃತೀಯ ರಂಗ ಸ್ಥಾಪನೆ ಕುರಿತು ನಾವು ಈಗಾಗಲೇ ಜೆಡಿಯು ಜೊತೆಗೆ ಚರ್ಚಿಸಿದ್ದೇವೆ. ಬಿಜೆಪಿ- ಜೆಡಿಯು ಕಡಿದ ಮೈತ್ರಿ ತೃತೀಯ ರಂಗ ರಚನೆಗೆ ಬಲತರಲಿದೆ' ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಸುಲ್ತಾನ್ ಅಹ್ಮದ್ ಹೇಳಿದ್ದಾರೆ.
`ಅಭಿನಂದನಾರ್ಹ ನಡೆ': `ಜೆಡಿಯುನ ನಡೆ ಅಭಿನಂದನಾರ್ಹ. ಇದರಿಂದ ಬಿಜೆಪಿ ಮತ್ತು ಕೋಮುವಾದಿ ಬಲಗಳ ವಿಶ್ವಾಸಕ್ಕೆ ಹಿನ್ನಡೆಯಾಗಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿಗಳಿಗೆ ಅವಕಾಶ ಕೊಟ್ಟಂತಾಗಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕಿರಣ್ಮೊಯ್ ನಂದ ತಿಳಿಸಿದ್ದಾರೆ.
`ಘೋಷಣೆಯಿಂದ ತೃತೀಯರಂಗ ರಚನೆಯಾಗದು': ಕೇವಲ ಘೋಷಣೆಯಿಂದ ತೃತೀಯರಂಗ ರಚಿಸಲು ಸಾಧ್ಯವಿಲ್ಲ. ಅಂತಹ ಪ್ರಯೋಗ ಸ್ಥಿರವಾಗಿರುವುದಿಲ್ಲ ಮತ್ತು ಜನರಲ್ಲಿ ವಿಶ್ವಾಸವನ್ನೂ ಗಳಿಸುವುದಿಲ್ಲ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ಹೇಳಿದ್ದಾರೆ.
`ಚುನಾವಣೆ ನಂತರ ಮತ್ತೆ ಮೈತ್ರಿ': `ಶಿರೋಮಣಿ ಅಕಾಲಿ ದಳವು ಒಗ್ಗಟ್ಟಿನಿಂದ ಬಿಜೆಪಿಯೊಂದಿಗಿದೆ. ಆದರೆ ಬಿಜೆಪಿ ಆಂತರಿಕ ವಿಚಾರದ ಬಗ್ಗೆ ತಲೆಹಾಕುವುದಿಲ್ಲ. ಲೋಕಸಭೆ ಚುನಾವಣೆಯ ನಂತರ ಎಲ್ಲ ಪಕ್ಷಗಳು ಬಿಜೆಪಿಯೊಂದಿಗೆ ಕೈಜೋಡಿಸಲಿವೆ' ಎಂದು ಪಂಜಾಬ್ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಪ್ರತಿಕ್ರಿಯಿಸಿದ್ದಾರೆ.
`ನಾವು ದ್ರೋಹ ಬಗೆಯುವುದಿಲ್ಲ'
(ಪಿಟಿಐ ವರದಿ): ಜೆಡಿಯು ನಿರ್ಧಾರ ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಇದರಿಂದ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂದಿದ್ದಾರೆ.
`ಜೆಡಿಯುವನ್ನು ನಾವು ಕಿರಿಯ ಸೋದರನಂತೆಯೇ ಕಂಡಿದ್ದವು. 17 ವರ್ಷಗಳ ಸುದೀರ್ಘವಾದ ಈ ರಾಜಕೀಯ ಮೈತ್ರಿಯು ಭಾವನಾತ್ಮಕವೂ ಆಗಿತ್ತು' ಎಂದು ನವದೆಹಲಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.`ಪರಸ್ಪರ ವಿಶ್ವಾಸ ಮತ್ತು ಅರಿತುಕೊಳ್ಳುವಿಕೆಯ ಆಧಾರದ ಮೇಲೆ ಈ ಮೈತ್ರಿ ಮೂಡಿತ್ತು. ನಮಗೆ ವಿಶ್ವಾಸದ್ರೋಹವಾದರೂ ನಾವು ದ್ರೋಹ ಮಾಡುವವರಲ್ಲ' ಎಂದಿದ್ದಾರೆ.
ಸುಷ್ಮಾ ಬೇಸರ: `ಜೆಡಿಯು ನಿರ್ಧಾರದಿಂದ ಬೇಸರವಾಗಿದೆ ಮತ್ತು ಇದು ದುರದೃಷ್ಟಕರ' ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಟ್ವಿಟರ್ನಲ್ಲಿ ಬರೆದಿದ್ದಾರೆ.`ಈ ನಿರ್ಧಾರದಿಂದ ಪ್ರಂಪಚವೇನೂ ಮುಳುಗುವುದಿಲ್ಲ. ಆದರೂ ಇದು ದುರದೃಷ್ಟಕರ ಬೆಳವಣಿಗೆ. ಎನ್ಡಿಎಗೆ ಹೊಸ ಮಿತ್ರ ಪಕ್ಷಗಳು ಸೇರಲಿವೆ' ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.