ADVERTISEMENT

ಮೋದಿಗೆ ಪಟ್ಟ: ಅಡ್ವಾಣಿ ಮೌನ

ರಾಜ್‌ನಾಥ್‌ ಸಿಂಗ್‌ ಮನವೊಲಿಕೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಪ್ರಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಂಬಂಧ ಪಕ್ಷದ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರನ್ನು ಮನವೊಲಿ­ಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್‌ ಸಿಂಗ್‌ ಬುಧವಾರ ಯತ್ನಿಸಿದರು.

ಆದರೆ, ಮೋದಿ ಅವರಿಗೆ ಬೆಂಬಲ ನೀಡುವ ವಿಚಾರದ ಕುರಿತು ಅಡ್ವಾಣಿ ಅವರು ಯಾವುದೇ ಭರವಸೆ ನೀಡಿಲ್ಲ ಎಂದು ಹೇಳಲಾಗಿದೆ.

ರಾಜ್‌ನಾಥ್‌ ಸಿಂಗ್‌ ಅವರು ಬುಧವಾರ ಮಧ್ಯಾಹ್ನ ನವದೆಹಲಿ ಯಲ್ಲಿರುವ ಬಿಜೆಪಿ ಸಂಸದೀಯ ಮಂಡಳಿಯ ಮುಖ್ಯಸ್ಥರೂ ಆಗಿರುವ ಅಡ್ವಾಣಿ ನಿವಾಸಕ್ಕೆ ತೆರಳಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ­ಯನ್ನಾಗಿ ನಾಮಕರಣ ಮಾಡುವುದಕ್ಕೆ ಅಡ್ವಾಣಿ ಆರಂಭದಿಂದಲೇ ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ತಕ್ಷಣ ಪಕ್ಷದ ಎಲ್ಲಾ ಹುದ್ದೆಗಳಿಗೆ ಅಡ್ವಾಣಿ ರಾಜೀನಾಮೆ ನೀಡಿದ್ದರು.

ನಂತರ ಆರ್‌ಎಸ್‌ಎಸ್‌ನ ಮಧ್ಯ­ಪ್ರವೇಶ­ದಿಂದಾಗಿ ಅವರು  ರಾಜೀನಾಮೆ­ಯನ್ನು ವಾಪಸ್ ಪಡೆದಿದ್ದರು.
ಮೋದಿ ಅವರಿಗೆ ಬೆಂಬಲ ನೀಡುವ ಬಗ್ಗೆ ಅಡ್ವಾಣಿ ಅವರಿಂದ ಯಾವುದೇ ಭರವಸೆ ಬಾರದ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಸಿಂಗ್‌ ಯತ್ನ ವಿಫಲವಾಗಿದೆ ಎಂದು ಹೇಳಲಾಗಿದೆ.

ಗಡ್ಕರಿ ಭೇಟಿ: ಮೋದಿ ವಿಚಾರದಲ್ಲಿ ಅಡ್ವಾಣಿ ಅವರ ಮನವೊಲಿಸುವುದ­ಕ್ಕಾಗಿ ಆರ್‌ಎಸ್‌ಎಸ್‌ ಪ್ರತಿನಿಧಿಯಾಗಿ ಬಿಜೆಪಿಯ ಮಾಜಿ ಅಧ್ಯಕ್ಷ  ನಿತಿನ್‌ ಗಡ್ಕರಿ ಅವರೂ  ಮಂಗಳವಾರ ಹಿರಿಯ ನಾಯಕನನ್ನು ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.