ADVERTISEMENT

ಮೋದಿ ಶ್ಲಾಘಿಸಿದ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಕೊರ್ಬಾ (ಛತ್ತೀಸಗಡ) (ಐಎಎನ್‌ಎಸ್‌): ಮುಂಬರುವ ಲೋಕ­ಸಭಾ ಚುನಾವಣೆಯ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ­ಯಾಗಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸುವ ಮೂಲಕ ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅಚ್ಚರಿ ಮೂಡಿಸಿದ್ದಾರೆ.

ಮೋದಿ ಆಯ್ಕೆಯಿಂದ ಮುನಿಸಿ ಕೊಂಡಿದ್ದ ಅಡ್ವಾಣಿ ಅವರ ಮನ­ವೊಲಿಸಲು ಕೆಲವು ನಾಯಕರು ಹಲವು ದಿನಗಳಿಂದ ಕಸರತ್ತು ನಡೆಸುತ್ತಲೇ ಇದ್ದರು. ಈ ಆಯ್ಕೆಯ ನಂತರ ಮೋದಿ ಕುರಿತು ಅಡ್ವಾಣಿ ಮಾಡಿದ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ.

500 ಮೆಗಾವಾಟ್‌ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರವನ್ನು ಸೋಮವಾರ ಇಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅಡ್ವಾಣಿ, ‘ಗುಜರಾತ್‌ನ ಗ್ರಾಮಾಂತರ ಭಾಗಗಳಿಗೆ ಅಭಿವೃದ್ಧಿಯನ್ನು ಕೊಂಡೊಯ್ದ ಮೊದಲ ನಾಯಕ ಮೋದಿ ಅವರಾ­ಗಿದ್ದಾರೆ. ನಾನು ಸಂಸದನಾಗಿ ಆಯ್ಕೆ­ಯಾದ ಗುಜರಾತ್‌ ರಾಜ್ಯವನ್ನು ಪ್ರಗತಿ­ಪಥದಲ್ಲಿ ಮುನ್ನಡೆಸುವಲ್ಲಿ ಅವರ ಪಾತ್ರ ಮಹತ್ವದ್ದು’ ಎಂದರು.

ಮೋದಿ ಅವರೊಂದಿಗೆ ಮಧ್ಯಪ್ರ­ದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಹಾಗೂ ಛತ್ತೀಸಗಢ ರಾಜ್ಯದ ಮುಖ್ಯ­ಮಂತ್ರಿ ರಮಣ್‌ ಸಿಂಗ್‌ ಅವರೂ ಸಹ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

‘ಈ ಎಲ್ಲರ ಸಾಧನೆ ಹಾಗೂ ಯಶಸ್ಸನ್ನು ಕಾಣಲು ನನಗೆ ಅತೀವ ಸಂತಸವಾಗುತ್ತದೆ’ ಎಂದು ಅಡ್ವಾಣಿ ಹೇಳಿದರು. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವಂತೆ ಛತ್ತೀಸಗಡ ಸರ್ಕಾರಕ್ಕೆ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.