ADVERTISEMENT

ಯುಡಿಎಫ್‌, ಎಲ್‌ಡಿಎಫ್‌ ಲೂಟಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2015, 19:59 IST
Last Updated 14 ಡಿಸೆಂಬರ್ 2015, 19:59 IST

ತ್ರಿಶೂರ್‌ (ಪಿಟಿಐ): ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಎರಡು ರಂಗಗಳು ಕೇರಳವನ್ನು ಲೂಟಿ ಮಾಡುವ ಕೆಲಸದಲ್ಲಿ ನಿರತವಾಗಿವೆ’ ಎಂದು ಟೀಕಿಸಿದ್ದಾರೆ.

ಬಿಜೆಪಿ ಸೋಮವಾರ ಇಲ್ಲಿ ಆಯೋ ಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಹೋದ ತಿಂಗಳು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಸಾಧಿಸಿದೆ. ಪಕ್ಷವು ಇಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿದೆ. ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ ಇತರ ಎರಡು ಶಕ್ತಿಗಳನ್ನು ಹಿಂದಿಕ್ಕಲಿದೆ’ ಎಂದರು. ಪ್ರಧಾನಿ ಹುದ್ದೆ ಏರಿದ ಬಳಿಕ ಮೋದಿ  ಕೇರಳಕ್ಕೆ ನೀಡಿದ ಮೊದಲ ಭೇಟಿ ಇದು.

‘ಎರಡು ರಂಗಗಳು ಒಂದರ ನಂತರ ಒಂದರಂತೆ ಆಡಳಿತ ನಡೆಸುತ್ತಿರುವುದು ಕೇರಳದ ರಾಜಕೀಯದ ದುರದೃಷ್ಟ ಎನ್ನಬೇಕು. ಒಂದು ರಂಗ ಆಡಳಿತಕ್ಕೆ ಬಂದು ಜನರನ್ನು ಲೂಟಿ ಮಾಡುತ್ತದೆ. ಐದು ವರ್ಷಗಳ ಆಡಳಿತದಿಂದ ಬೇಸತ್ತ ಬಳಿಕ ಜನರು ಆ ರಂಗವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ. ಆ ಬಳಿಕ ಇನ್ನೊಂದು ರಂಗ ಅಧಿಕಾರಕ್ಕೇರುತ್ತದೆ. ಈ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಈ ಎರಡೂ ರಂಗಗಳು ತಮ್ಮ ತಪ್ಪುಗಳನ್ನು ಮರೆಮಾಚಿ ಜನರನ್ನು ಕೊಳ್ಳೆ ಹೊಡೆಯುವ ಕಾಯಕ ಮುಂದುವರಿಸಿವೆ’ ಎಂದು ಹೇಳಿದ್ದಾರೆ.

‘ಕೇರಳದ ಜನರು ಇನ್ನು ಮುಂದೆ ಕೋಪಗೊಳ್ಳಬೇಕಿಲ್ಲ. ಏಕೆಂದರೆ ಇಲ್ಲಿ ಮೂರನೇ ಶಕ್ತಿಯೊಂದು ಹೊರಹೊಮ್ಮಿದೆ. ಈ ಶಕ್ತಿಯು ರಾಜ್ಯವನ್ನು ಕೆಡುಕು ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಿದೆ. ಮೂರನೇ ಶಕ್ತಿಯ ಉದಯವು ಕೇರಳದ ಭವಿಷ್ಯವನ್ನೇ ಬದಲಿಸಲಿದ್ದು,  ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದೆ’  ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.