ನವದೆಹಲಿ (ಪಿಟಿಐ): ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಕಚೇರಿಯಲ್ಲಿ `ಕಳ್ಳಗಿವಿ~(ಕದ್ದಾಲಿಸುವ ಉಪಕರಣ) ಇರುವುದು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆಗೆ ಜಾಗೃತಾದಳಕ್ಕೆ (ಇಂಟಲಿಜೆನ್ಸ್ ಬ್ಯೂರೋ) ಆದೇಶಿಸಲಾಗಿದೆ.
ರಕ್ಷಣಾ ಕಾರ್ಯದರ್ಶಿ ಶಶಿಕಾಂತ ಶರ್ಮಾ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಜಾಗೃತಾದಳಕ್ಕೆ ಸೂಚಿಸುವುದರೊಂದಿಗೆ ಈ ವಿಚಾರ ಬೆಳಕಿಗೆ ಬಂತು ಎಂದು ಸಚಿವಾಲಯ ಮೂಲಗಳು ಪಿಟಿಐಗೆ ತಿಳಿಸಿವೆ.
ದೂರವಾಣಿ ಲೈನ್ ಗಳನ್ನು ನಿರ್ವಹಿಸುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ದೂರವಾಣಿ ಲೈನ್ಗಳಲ್ಲಿನ ದೋಷವನ್ನು ಪತ್ತೆ ಹಚ್ಚಿದರು. ಆ ನಂತರ ಸಚಿವಾಲಯದ ಅಧಿಕಾರಿಗಳು ಈ ಸೇನಾ ಸಿಬ್ಬಂದಿ ಮೂಲಕ ತಮ್ಮ ದೂರವಾಣಿ ಲೈನ್ಗಳ ತಪಾಸಣೆ ಮಾಡುವುದನ್ನು ನಿಲ್ಲಿಸಿದರು ಎನ್ನಲಾಗಿದೆ.
ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನಾಂಕ ವಿವಾದವು ಸುಪ್ರೀಂಕೋರ್ಟ್ ಮಧ್ಯ ಪ್ರವೇಶದೊಂದಿಗೆ ಇತ್ಯರ್ಥವಾದ ಬಳಿಕ ಇದೀಗ ಈ ಹೊಸ ಬೆಳವಣಿಗೆ ನಡೆದಿದೆ. ಕಳೆದ ವರ್ಷ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಕಚೇರಿಯಲ್ಲೂ ಇದೇ ಮಾದರಿ ಶಂಕಿತ ~ಕಳ್ಳಗಿವಿ~ ಪ್ರಕರಣ ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.