ADVERTISEMENT

ರಕ್ಷಣೆ ಕರೆಯೂ ಜೀವ ಉಳಿಸಲಿಲ್ಲ...

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ರಾಂಚಿ(ಐಎಎನ್‌ಎಸ್):  `ನಕ್ಸಲರ ದಾಳಿಗೆ ಸಿಲುಕಿದ್ದೇನೆ. ದಯವಿಟ್ಟು ನನ್ನನ್ನು ಹೇಗಾದರೂ ರಕ್ಷಿಸಿ' ಎಂಬ  ಪಕೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರ್‌ಜಿತ್ ಬಲಿಹಾರ್ ಅವರ ಕೋರಿಕೆ ಈಡೇರಲೇ ಇಲ್ಲ. ಮಂಗಳವಾರ ರಾಂಚಿಯಿಂದ 400 ಕಿ.ಮೀ. ದೂರದ ಅಮ್ರಪಾ ಅರಣ್ಯ ಅಂಚಿನಲ್ಲಿ ಬರುತ್ತಿದ್ದಾಗ ಅವರ ಮೇಲೆ ನಕ್ಸಲರು ದಾಳಿ ನಡೆಸಿ ಗುಂಡಿಕ್ಕಿ ಕೊಂದರು.

ಅಮರ್‌ಜಿತ್ ತಮ್ಮ ಸಿಬ್ಬಂದಿ ಜತೆ ವಾಹನದಲ್ಲಿ ಬರುತ್ತಿದ್ದಾಗ ಮೊದಲಿಗೆ ನಕ್ಸಲರು ನೆಲಬಾಂಬ್ ಸ್ಫೋಟಿಸಿದರು. ಇದು ನಕ್ಸಲರದೇ ಕೃತ್ಯ ಎಂದು ತಿಳಿದ ಬಲಿಹಾರ್ ಹೇಗಾದರೂ ಮಾಡಿ ನಮ್ಮನ್ನು ರಕ್ಷಿಸಿ ಎಂದು ಪೊಲೀಸರಿಗೆ ಮೊಬೈಲ್‌ನಿಂದ ಕರೆ ಮಾಡಿದರು. ಆದರೆ ಪೊಲೀಸರು ಘಟನಾ ಸ್ಥಳಕ್ಕೆ ಬರುವುದಕ್ಕಿಂತ ಮೊದಲೇ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರು ಮಾತನಾಡುತ್ತಿದ್ದ ಮೊಬೈಲ್ ಸೆಟ್‌ನಲ್ಲಿಯೂ ಗುಂಡುಗಳಿದ್ದುದು ದಾಳಿಯ ತೀವ್ರತೆಗೆ ಸಾಕ್ಷಿಯಾಗಿ ಉಳಿದಿದೆ. 

ಸುಮಾರು 40ರಿಂದ 50ರಷ್ಟಿದ್ದ ನಕ್ಸಲರು, ಬಲಿಹಾರ್ ವಾಹನದಲ್ಲಿ ಬರುತ್ತಿದ್ದ ಸ್ಥಳದಲ್ಲಿ ಅಡಗಿಕೊಂಡಿದ್ದರು. ಮೂಲಗಳ ಪ್ರಕಾರ, ನಕ್ಸಲರೇ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ತಿಳಿಸಿದರು ಎನ್ನಲಾಗಿದೆ.

ಅಂತಿಮ ನಮನ: ನಕ್ಸಲರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪಕೂರ್ ಪೊಲೀಸ್ ವರಿಷ್ಠಾಧಿಕಾರಿ ಅಮರ್‌ಜಿತ್ ಬಲಿಹಾರ್ ಅವರಿಗೆ ಬುಧವಾರ ಅಂತಿಮ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.