ADVERTISEMENT

ರಾಜಕೀಯ ಲಾಭಕ್ಕಾಗಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಮುಸ್ಲಿಂ ಲೀಗ್ ಸುಳ್ಳು ಭರವಸೆ ನೀಡಿತ್ತು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 16:29 IST
Last Updated 18 ಜೂನ್ 2018, 16:29 IST
ರಾಧಿಕಾ
ರಾಧಿಕಾ   

ನವದೆಹಲಿ: ರಾಜಕೀಯ ಲಾಭಕ್ಕಾಗಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಮುಸ್ಲಿಂ ಲೀಗ್ ಸುಳ್ಳು ಭರವಸೆ ನೀಡಿತ್ತು ಎಂದು ರೋಹಿತ್ ಮೆಮುಲ ಅವರ ತಾಯಿ ಹೇಳಿದ್ದಾರೆ. 2016ರಲ್ಲಿ ದಲಿತ, ಪಿಹೆಚ್‍ಡಿ ವಿದ್ಯಾರ್ಥಿ ರೋಹಿತ್ ಮೆಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು.

ವೆಮುಲ ಆತ್ಮಹತ್ಯೆ ಮಾಡಿದ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಮ್ಮ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿತ್ತು. ಆದರೆ ಎರಡು ವರ್ಷಗಳಿಂದ ಈ ಬಗ್ಗೆ ಸುದ್ದಿಯೇ ಇಲ್ಲ ಎಂದು ವೆಮುಲ ತಾಯಿ ಹೇಳಿದ್ದಾರೆ.

ದ ನ್ಯೂಸ್ ಮಿನಿಟ್ ಸುದ್ದಿತಾಣದ ವರದಿ ಪ್ರಕಾರ ಹಾಸ್ಟೆಲ್ ಕೋಣೆಯಲ್ಲಿ ವೆಮುಲಾ ಆತ್ಮಹತ್ಯೆ ಮಾಡಿಕೊಂಡನಂತರ ಐಯುಎಂಎಲ್ ವೆಮುಲಾ ತಾಯಿಗೆ ಮನೆ ನಿರ್ಮಿಸುವುದಕ್ಕಾಗಿ ₹20 ಲಕ್ಷ ನೀಡುವುದಾಗಿ ಭರವಸೆ ನೀಡಿತ್ತು.
ರೋಹಿತ್ ಮರಣ ಹೊಂದಿದಾಗ ನಾನು ಅಳುತ್ತಲೇ ಇದ್ದೆ. ಯಾರು ನನ್ನನ್ನು ಭೇಟಿ ಮಾಡಲು ಬರುತ್ತಿದ್ದರು ಎಂಬುದರ ಬಗ್ಗೆ ನನಗೆ ತಿಳಿಯುತ್ತಿರಲಿಲ್ಲ. ಆ ವೇಳೆ ಈ ಪಕ್ಷದ ಸದಸ್ಯರು ಕೇರಳದಿಂದ ಬಂದಿದ್ದರು. ನೀವು ತುಂಬಾ ಬಡವರು ಎಂದು ತಿಳಿದು ನಿಮಗೆ ಸಹಾಯ ಮಾಡಲು ಬಂದಿದ್ದೇವೆ ಎಂದು ಅವರು ಹೇಳಿದ್ದರು.
ಆಮೇಲೆ ಕೇರಳಕ್ಕೆ ಕರೆದೊಯ್ದು  ಪಕ್ಷದ ದೊಡ್ಡ ಸಭೆಗಳಲ್ಲಿ ನಾನು ಭಾಗವಹಿಸುವಂತೆ ಮಾಡಿದ್ದರು. ಆ ಸಭೆಗಳಲ್ಲಿ ನನಗೆ ₹20 ಲಕ್ಷ ನೀಡುವುದಾಗಿಯೂ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು ಎಂದು ವೆಮುಲಾ ತಾಯಿ ರಾಧಿಕಾ ಹೇಳಿದ್ದಾರೆ. ಮನೆ ನಿರ್ಮಿಸಲು ವಿಜಯವಾಡ ಮತ್ತು ಗುಂಟೂರು ನಡುವಿನ ಕೊಪ್ಪುರವುರು ಎಂಬಲ್ಲಿ ಐಯುಎಂಎಲ್ ಸ್ಥಳ ಸೂಚಿಸಿತ್ತು.

ADVERTISEMENT

ತಮ್ಮನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡ ಐಯುಎಂಎಲ್ ವಿರುದ್ಧ ಕಿಡಿ ಕಾರಿದ ರಾಧಿಕಾ, ಇಂಥಾ ಸಮಯದಲ್ಲಿ ನಮ್ಮನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಭರವಸೆ ನೀಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಐಯುಎಂಎಲ್ ನೀಡಿದ ಎರಡು ಚೆಕ್‍ಗಳು ಬೌನ್ಸ್ ಆಗಿವೆ. ಅವರಿಂದಾಗಿ ನನಗೆ ತುಂಬಾ ತೊಂದರೆಯಾಗಿದೆ. ಅವರು ದುಡ್ಡು ಕೊಡದಿದ್ದರೂ ಸಮಸ್ಯೆ ಇರಲಿಲ್ಲ. ಆದರೆ ಇಷ್ಟೊಂದು ಸತಾಯಿಸಿದ್ದು ಸರಿಯಲ್ಲ ಎಂದಿದ್ದಾರೆ.

ಆದಾಗ್ಯೂ, ಚೆಕ್ ಬೌನ್ಸ್ ಆಗಿದ್ದು ಅದರಲ್ಲಿದ್ದ ತಪ್ಪಿನಿಂದಾಗಿತ್ತು ಎಂದು ಐಯುಎಂಎಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.