ನವದೆಹಲಿ (ಐಎಎನ್ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಅಡಿಯಲ್ಲಿ ಸಿಬಿಐ ವಶದಲ್ಲಿರುವ ಮಾಜಿ ದೂರ ಸಂಪರ್ಕ ಖಾತೆ ಸಚಿವ ಎ.ರಾಜಾ ಅವರನ್ನು ದೆಹಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದುವರೆಗೆ ಸಿಬಿಐ ವಶದಲ್ಲಿದ್ದ ರಾಜಾ ಅವರನ್ನು ಹೆಚ್ಚಿನ ತನಿಖೆಗೆ ಪುನಃ ತಮ್ಮ ವಶಕ್ಕೆ ನೀಡುವಂತೆ ತನಿಖಾ ಸಂಸ್ಥೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಓ.ಪಿ.ಸೈನಿ ಅವರು ಮಾರ್ಚ್ 3ರ ವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶ ಮಾಡಿದರು. ರಾಜಾ ಪರ ವಕೀಲ ರಮೇಶ್ ಗುಪ್ತ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಕಕ್ಷಿದಾರರಿಗೆ ಅಗತ್ಯ ಔಷಧ, ಪುಸ್ತಕಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಒದಗಿಸಲು ತಿಹಾರ್ ಜೈಲಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.