ADVERTISEMENT

ರಾಜೀವ್‌ ಹಂತಕರಿಗೆ ಸುಪ್ರೀಂ ಜೀವದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 20:02 IST
Last Updated 18 ಫೆಬ್ರುವರಿ 2014, 20:02 IST
ರಾಜೀವ್‌ ಹಂತಕರಿಗೆ ಸುಪ್ರೀಂ ಜೀವದಾನ
ರಾಜೀವ್‌ ಹಂತಕರಿಗೆ ಸುಪ್ರೀಂ ಜೀವದಾನ   

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿ­ಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.

ಹೀಗಾಗಿ, 1991ರಿಂದಲೇ ಸೆರೆಮನೆ­ಯಲ್ಲಿರುವ ಶಾಂತನ್‌, ಮುರುಗನ್‌ ಮತ್ತು ಪೇರ್‌ಅರಿವಲನ್‌ ಅವರಿಗೆ ಜೀವದಾನ ದೊರೆತಿದೆ.

ಈ ಮೂವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಬಗ್ಗೆ ತೀರ್ಮಾನಕ್ಕೆ ಬರಲು ಕೇಂದ್ರ ಸರ್ಕಾರವು 11 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಂಡಿರುವುದು ಅಕ್ಷಮ್ಯ ಎಂದು ಮುಖ್ಯ ನ್ಯಾಯ­ಮೂರ್ತಿ ಪಿ.ಸದಾಶಿವಂ, ನ್ಯಾಯ­ಮೂರ್ತಿ­­ಗಳಾದ ರಂಜನ್‌ ಸಹಾಯ್‌ ಮತ್ತು ಎಸ್‌.ಕೆ. ಸಿಂಗ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಕ್ಷಮಾದಾನದ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿವೇಚನಾರಹಿತ ವಿಳಂಬ ಆಗಿಲ್ಲ ಮತ್ತು ಗಲ್ಲು ಶಿಕ್ಷೆಗೆ ಒಳಗಾದ ಇವರು ಸೆರೆಮನೆಯಲ್ಲಿ ಯಾತನಾ­ಮಯ  ಬದುಕು ನಡೆಸುತ್ತಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಅದು ತಿರಸ್ಕರಿಸಿತು.

ಕ್ಷಮಾ­ದಾನ ಅರ್ಜಿಯನ್ನು ನ್ಯಾಯೋ­ಚಿತ ಅವಧಿ­ಯಲ್ಲಿ ಇತ್ಯರ್ಥ ಮಾಡ­ಬೇಕು. ಆ ಮೂಲಕ ತ್ವರಿತ ನಿರ್ಧಾರ ಕೈಗೊ­ಳ್ಳಲು ಸಂದರ್ಭಾ­­ನುಸಾರ ರಾಜ್ಯಪಾಲರು ಅಥವಾ ರಾಷ್ಟ್ರಪತಿ­ಯವರಿಗೆ ನೆರವಾಗ­ಬೇಕು ಎಂದು  ಪೀಠ ಸೂಚಿಸಿತು.

‘ಕ್ಷಮಾದಾನ ಅರ್ಜಿಗಳನ್ನು ಈಗಿನ­ದಕ್ಕಿಂತ ಹೆಚ್ಚು ತ್ವರಿತವಾಗಿ ತೀರ್ಮಾನಿ­ಸುವುದು ಸಾಧ್ಯ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿತು.

ಸರ್ಕಾರದ ವಿರೋಧ: ಗಲ್ಲು ಶಿಕ್ಷೆಯನ್ನು ಮರಣ ದಂಡನೆಗೆ ಇಳಿಸಬೇಕು ಎಂಬ ಮೂವರು ಹಂತಕರ ಮನವಿಯನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿತ್ತು.

ಕ್ಷಮಾ­ದಾನ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳು­ವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಸೂಕ್ತ­ವಾದ ಪ್ರಕರಣ ಇದಲ್ಲ ಎಂದು ಪ್ರತಿಪಾದಿ­ಸಿತ್ತು. ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದ್ದರೂ  ಅದು ‘ವಿವೇಚನಾರಹಿತ, ವಿವರಣೆರಹಿತ ಮತ್ತು ಆತ್ಮಸಾಕ್ಷಿರಹಿತ’ ಎಂಬ ವ್ಯಾಖ್ಯಾನ ಸರಿಯಲ್ಲ ಎಂದು ವಾದಿಸಿತ್ತು.

ವಿಳಂಬ­ದಿಂದಾಗಿ ಈ ಮೂವರು ತೀವ್ರ ವೇದನೆ ಅನುಭವಿಸಿದ್ದಾರೆ. ಪ್ರಕರಣದಲ್ಲಿ ಸುಪ್ರೀಂ­ಕೋರ್ಟ್‌ ಮಧ್ಯ­ಪ್ರವೇಶಿ­ಸ­ಬೇಕು ಎಂದು ಹಂತಕರ ಪರ ವಕೀಲರು ವಾದಿಸಿದರು.

ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳು­ವಲ್ಲಿ ಸರ್ಕಾರ ವಿವೇಚನಾರಹಿತ ವಿಳಂಬ ಮಾಡಿದರೆ ಗಲ್ಲು ಶಿಕ್ಷೆ ಜೀವಾ­ವಧಿಗೆ ಇಳಿಸಬಹುದು ಎಂದು ಜನವರಿ 21ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.

ಕಾಡುಗಳ್ಳ ವೀರಪ್ಪನ್‌ನ ನಾಲ್ವರು ಸಹಚರರು ಸೇರಿದಂತೆ ಗಲ್ಲು ಶಿಕ್ಷೆಗೆ ಒಳ­ಗಾಗಿದ್ದ 15 ಅಪರಾಧಿಗಳ ಶಿಕ್ಷೆಯನ್ನು ಜೀವಾ­ವಧಿಗೆ ಇಳಿಸಿತ್ತು. ಇದೇ ನೆಲೆಯಲ್ಲಿ ಈಗ ರಾಜೀವ್‌ ಹಂತಕರಿಗೂ ಜೀವದಾನ ದೊರೆತಿದೆ.

ಕೊನೆಯ ಭರವಸೆ
ಕೈದಿಗಳು ಮತ್ತು ಅವರ ಕುಟುಂಬ­ದವರಿಗೆ ಕ್ಷಮಾದಾನ­ವೊಂದೇ ಕೊನೆಯ ಭರವಸೆ. ಆದ್ದರಿಂದ ಇಂತಹ ಅರ್ಜಿಗಳನ್ನು ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು.
-ಸುಪ್ರೀಂ ಕೋರ್ಟ್‌ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.