ನವದೆಹಲಿ: ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಮಿಳುನಾಡಿಗೆ ಹೇಳಿದೆ.
ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಏಪ್ರಿಲ್ 18ರಂದೇ ತಮಿಳುನಾಡಿಗೆ ಮಾಹಿತಿ ನೀಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಸರ್ಕಾರದ ಅಧಿಕಾರಿಗಳು ಈ ವಿಷಯ ದೃಢಪಡಿಸಿದ್ದಾರೆ.
‘ಅಪರಾಧ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 435ರ ಅನ್ವಯ, ರಾಜೀವ್ ಹತ್ಯೆ ಪ್ರಕರಣದ ಏಳು ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಬೇಕು ಎನ್ನುವ ತಮಿಳುನಾಡು ರಾಜ್ಯಪಾಲರ ಪ್ರಸ್ತಾವನೆಯನ್ನು ಅನುಮೋದಿಸಲು ಸಾಧ್ಯವಿಲ್ಲ’ ಎಂದು ರಾಷ್ಟ್ರಪತಿ ಅಂಕಿತ ಉಳ್ಳ ಪತ್ರವನ್ನು ಜಂಟಿ ಕಾರ್ಯದರ್ಶಿ ವಿ.ಬಿ.ದುಬೆ ಅವರು ರವಾನಿಸಿದ್ದಾರೆ.
ಈ ಹಿಂದೆ ಯುಪಿಎ ನೇತೃತ್ವದ ಸರ್ಕಾರ ಸಹ ಹಂತಕರ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಿತ್ತು.
ದಯಮರಣಕ್ಕೆ ಮನವಿ: ಏಳು ಆರೋಪಿಗಳಲ್ಲಿ ಒಬ್ಬನಾಗಿರುವ ಎ.ಜಿ.ಪೇರರಿವಾಲನ್ ಅವರ ತಾಯಿ, ತನ್ನ ಮಗನಿಗೆ ದಯಾಮರಣ ನೀಡುವಂತೆ ಕೋರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
‘27 ವರ್ಷಗಳಿಂದ ನನ್ನ ಮಗ ಅನುಭವಿಸುತ್ತಿರುವ ಸಂಕಷ್ಟ ಕೊನೆಗಾಣಿಸಲು ಆತನಿಗೆ ದಯಾಮರಣ ನೀಡಬೇಕು ಎಂದು ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.