ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್ಆರ್ಎಚ್ಎಂ) ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ನಾಲ್ಕು ಹೊಸ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಔಷಧಿ ಸಾಗಣೆಯಲ್ಲಿ ಅಕ್ರಮ ಮತ್ತು ಹೊರಗಡೆ ಪೂರೈಕೆ ಆರೋಪದ ಮೇಲೆ ಸಿಬಿಐ 22 ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿ ಈ ಪ್ರಕರಣ ದಾಖಲಿಸಿಕೊಂಡಿದೆ.
ಲಖನೌದ ಅಮಿನ್ಬಾದ್ ಪ್ರದೇಶದ ಔಷಧಿ ಮಾರ್ಕೆಟ್ ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಸಿಬಿಐ ಶೋಧನಾ ಕಾರ್ಯಾಚರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.
ಎನ್ಆರ್ಎಚ್ಎಂ ಅಡಿ ರಾಜ್ಯಕ್ಕೆ ನೀಡಿದ ಕೇಂದ್ರದ ಅನುದಾನದಲ್ಲಿ ದುರುಪಯೋಗವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸ ಪ್ರಕರಣದ ಜೊತೆಗೆ ಸಿಬಿಐ ಇದುವರೆಗೆ 12 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.ಹಲವು ವೈದ್ಯರು ಮತ್ತು ಔಷಧಿ ಸರಬರಾಜುದಾರರ ಹೆಸರನ್ನು ಎಫ್ಐಆರ್ನಲ್ಲಿ ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಪ್ರಮುಖ ಆರೋಪಿ ಕುಟುಂಬ ಕಲ್ಯಾಣ ಖಾತೆ ಮಾಜಿ ಸಚಿವ ಬಾಬುಸಿಂಗ್ ಕುಶವಾ ಮತ್ತವರ ಬೆಂಬಲಿಗ ಬಿಎಸ್ಪಿ ಶಾಸಕ ರಾಮ್ ಪ್ರಸಾದ ಜೈಸ್ವಾಲ್ ಅವರ ವಿಚಾರಣೆ ಬಳಿಕ ಸಿಬಿಐ ಈ ಕಾರ್ಯಾಚರಣೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.